ಬೆಂಗಳೂರು: ರಾಜ್ಯ ಸರ್ಕಾರ ಮುಸಲ್ಮಾನರಿಗೆ ಮೀಸಲಾತಿ ನೀಡಿದರೆ ವಿಜಯೇಂದ್ರನಿಗೆ ಏನು ಸಮಸ್ಯೆ? ಅದು ಮುಸಲ್ಮಾನರ ಓಲೈಕೆ ಹೇಗೆ ಆಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ತಿರುಗೇಟು ನೀಡಿದ್ದಾರೆ.
ವಿಧಾನಸೌಧದ ಆವರಣದಲ್ಲಿ ಇಂದು(ಮಾರ್ಚ್.5) ವಿಜಯೇಂದ್ರ ಅವರ ಹೇಳಿಕೆಗಳಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಿಮಗೇನು ಸಮಸ್ಯೆ? ಇದು ಓಲೈಕೆ ಹೇಗಾಗುತ್ತದೆ. ಅಲ್ಪಸಂಖ್ಯಾತರು ಈ ಸಮಾಜದಲ್ಲಿ ಬದುಕುತ್ತಿಲ್ಲವಾ? ನಾನು ಸಮಾಜದ ಮುಖ್ಯ ವಾಹಿನಿಗೆ ಬರೋದು ಬೇಡವಾ ಎಂದು ಪ್ರಶ್ನಿಸಿದರು.
ನಮ್ಮ ಪಕ್ಷವೇ ಗುತ್ತಿಗೆಯಲ್ಲಿ ಮೀಸಲಾತಿ ತಂದಿದ್ದು, ಎಸ್ಸಿ, ಎಸ್ಟಿ ಹಾಗೂ ಹಿಂದುಳಿದವರಿಗೆ ಮೀಸಲಾತಿ ನೀಡಿದ್ದೇವೆ. ಹೀಗಾಗಿ ಅಲ್ಪಸಂಖ್ಯಾತ, ಸಣ್ಣ ಗುತ್ತಿಗೆದಾರರಿಗೆ ಮೀಸಲಾತಿ ನೀಡಿ ಎಂದು ಮನವಿ ಮಾಡಿದ್ದೇವೆ. ಈ ಮನವಿ ಸರ್ಕಾರ ಒಪ್ಪಿ ಮೀಸಲಾತಿ ನೀಡಿದರೆ ಸ್ವಾಗತ ಮಾಡುತ್ತೇವೆ ಎಂದು ಹೇಳಿದರು.





