ಬೆಂಗಳೂರು: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI), ರೆಪೊ ರೇಟ್ 25 ಬೇಸಿಸ್ ಇಳಿಸುವ ಮೂಲಕ ಆರ್ಥಿಕ ಬೆಳವಣಿಗೆಯ ಪುನರುಜ್ಜೀವನಕ್ಕೆ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (FKCCI) ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಅವರು, ಹಣದುಬ್ಬರ, ಒಟ್ಟು ರಾಷ್ಟ್ರೀಯ ಉತ್ಪನ್ನದ (GDP) ಸಂಕಷ್ಟದಿಂದ ದೇಶದ ಆರ್ಥಿಕತೆ ಕುಸಿಯುವ ಸಮಯದಲ್ಲಿ ರೆಪೊ ದರ ಕಡಿಮೆ ಮಾಡಿರುವ ಆರ್ಬಿಐನ ನಿರ್ಧಾರ ತುಂಬಾ ಸೂಕ್ತವಾಗಿದೆ ಎಂದು ತಿಳಿಸಿದರು.
ರೆಪೊ ದರ ಕಡಿಮೆಯಿಂದ ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ. ಬಡ್ಡಿದರದಿಂದ ನರಳುತ್ತಿರುವ ಎಂಎಸ್ಎಂಇಗಳು, ಉತ್ಪಾದನೆ, ರಿಯಲ್ ಎಸ್ಟೇಟ್ ಮತ್ತು ಕೈಗಾರಿಕೆಗಳು ಇದರ ಪ್ರಯೋಜನ ಪಡೆಯಲಿವೆ. ಇದು ಭಾರತದ ಆರ್ಥಿಕ ಬೆಳವಣಿಗೆಯ ಪಥವನ್ನು ಬಲಪಡಿಸುತ್ತದೆ ಎಂದು ಹೇಳಿದರು.
ಅಲ್ಲದೇ, ದೇಶಿಯ ಉದ್ಯಮಗಳಿಗೆ ಬೆಂಬಲ ನೀಡುವುದಲ್ಲದೇ ವಿದೇಶಿ ಹೂಡಿಕೆಗಳನ್ನು ಆಕರ್ಷಿಸುತ್ತದೆ. ಕರ್ನಾಟಕ ಮತ್ತು ಭಾರತವನ್ನು ವ್ಯಾಪಾರ ವಿಸ್ತರಣೆಗೆ ಆಕರ್ಷಕ ತಾಣವನ್ನಾಗಿ ಮಾಡುತ್ತದೆ. ಈ ದರ ಕಡಿತದ ಪ್ರಯೋಜನಗಳನ್ನು ಗ್ರಾಹಕರಿಗೆ ತ್ವರಿತವಾಗಿ ವರ್ಗಾಯಿಸುವಂತೆ FKCCI ಒತ್ತಾಯಿಸುತ್ತದೆ ಎಂದು ಎಂ.ಜಿ.ಬಾಲಕೃಷ್ಣ ಹೇಳಿದರು.





