ಬೆಂಗಳೂರು : ಆರ್.ಸಿ.ಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿರುವ ಕಾಲ್ತುಳಿತ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ಹೊಣೆಗಾರಿಕೆಯಾಗಿದ್ದು, ಮುಖ್ಯಮಂತ್ರಿಯವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ವಿರೋಧ ಪಕ್ಷಗಳು ಪಟ್ಟು ಹಿಡಿದಿದ್ದು, ಸರ್ಕಾರದ ಉತ್ತರದಿಂದ ಅಸಮಾಧಾನಗೊಂಡು ಸಭಾತ್ಯಾಗ ನಡೆಸಿದವು.
ಚಿನ್ನಸ್ವಾಮಿ ಕ್ರೀಡಾಂಗದ ಬಳಿಯ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಧಾನ ಮಂಡಲದ ಅಧಿವೇಶನದಲ್ಲಿ ನಡೆದ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದೀರ್ಘ ಉತ್ತರ ನೀಡಿದರು. ಬಳಿಕ ಸ್ಪಷ್ಟನೆ ಕೇಳಿದ ಬಿಜೆಪಿಯ ಅರಗ ಜ್ಞಾನೇಂದ್ರ, ರಾಜ್ಯ ಸರ್ಕಾರ ಸಮರ್ಪಕವಾದ ಬಂದೋಬಸ್ತ್ ಆಯೋಜಿಸಿರಲಿಲ್ಲ. ಹೀಗಾಗಿ ಅಮಾಯಕರ ಸಾವಿಗೆ ರಾಜ್ಯ ಸರ್ಕಾರವೇ ಹೊಣೆ ಎಂದು ವಾಗ್ದಾಳಿ ನಡೆಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಸೌಧದ ಮುಂದೆ ಆರ್ಸಿಬಿ ಆಟಗಾರರನ್ನು ಅಭಿನಂದಿಸುವಾಗಲೇ ಕಾಲ್ತುಳಿತವಾಗಿತ್ತು. ಕೆಲವರು ಮೃತಪಟ್ಟಿದ್ದರು. ಈ ವಿಚಾರ ತಮಗೆ ಗೊತ್ತೇ ಇಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಇದು ಗುಪ್ತದಳ ಮತ್ತು ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ ಎಂದರು.
ಕಾರ್ಯಕ್ರಮ ಮಾಡಿದ್ದು ಸರ್ಕಾರ, ಪೊಲೀಸ್ ಇಲಾಖೆ ಅಲ್ಲ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಅವರು ಅಭಿಮಾನಿಗಳಿಗೆ ವಿಧಾನಸೌಧದ ಬಳಿ ಬರಬೇಡಿ ಕ್ರೀಡಾಂಗಣದ ಬಳಿ ಕಾರ್ಯಕ್ರಮ ಇದೆ. ಅಲ್ಲಿ ಹೋಗಿ ಎಂದು ಎರಡು ಬಾರಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದಾರೆ. ಹೀಗಾಗಿ ಸರ್ಕಾರವೇ ಹೊಣೆ ಎಂದರು.
ಜನಸಂದಣಿ ನಿರ್ವಹಣೆಯ ಬಗ್ಗೆ ನೆನ್ನೆ ವಿಧಾನಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸಲಾಗಿತ್ತು. ಅದರ ಅಗತ್ಯ ಇರಲಿಲ್ಲ. 2009ರಲ್ಲೇ ಪ್ರಮಾಣಿತ ಕಾರ್ಯ ಸೂಚಿಯನ್ನು ರೂಪಿಸಲಾಗಿದೆ. ಅದರಲ್ಲಿ ಪೂರ್ವಾನುಮತಿ ಪಡೆಯುವುದು ಸೇರಿದಂತೆ ಎಲ್ಲಾ ರೀತಿಯ ಸೂಚನೆಗಳಿವೆ. ಆರ್ಸಿಬಿ ವಿಜಯೋತ್ಸವ ಬೇಡ ಎಂದು ವಿಧಾನಸೌಧದ ಭದ್ರತಾ ಅಧಿಕಾರಿ ಪತ್ರ ಬರೆದಿದ್ದರು. ಅದನ್ನು ಉಲ್ಲಂಘಿಸಿ ಕಾರ್ಯಕ್ರಮ ಮಾಡಲಾಗಿದೆ ಎಂದು ಟೀಕಿಸಿದರು.
ಕರ್ನಾಟಕ ಕ್ರಿಕೆಟ್ ಸಂಸ್ಥೆ ಹೈಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿ ದುರ್ಘಟನೆಗೆ ರಾಜ್ಯ ಸರ್ಕಾರವೇ ಹೊಣೆ. ಐಪಿಎಲ್ ಆಟಗಾರರನ್ನು ಕರೆತರುವಂತೆ ಸರ್ಕಾರವೇ ಕೇಳಿಕೊಂಡಿತ್ತು. ನಮಗೆ ವಿಜಯೋತ್ಸವ ಮಾಡುವ ಉದ್ದೇಶ ಇರಲಿಲ್ಲ. ಜನಾಕೋಶದಿಂದ ತಪ್ಪಿಸಿಕೊಳ್ಳಲು ಸರ್ಕಾರ ನಮ ಮೇಲೆ ಆರೋಪ ಮಾಡಿದೆ ಎಂದು ದೂರಿದ್ದಾರೆ. ಸರ್ಕಾರ ಈ ಆರೋಪಕ್ಕೆ ಯಾವ ರೀತಿಯ ಉತ್ತರ ನೀಡಿದೆ ಎಂದು ಅಶೋಕ್ ಪ್ರಶ್ನಿಸಿದರು.
ಸರ್ಕಾರದಿಂದ ಲೋಪಗಳಾಗಿವೆ. ತಪ್ಪಾಗಿದೆ ಎಂದು ಕೇಳಿಕೊಂಡರೆ. ಮುಖ್ಯಮಂತ್ರಿ ಅವರ ಮೇಲಿರುವ ಕಪ್ಪು ಚುಕ್ಕೆ ಅಳಿಸಿ ಹೋಗುತ್ತದೆ. ಕ್ಷಮೆ ಕೇಳುವುದರಿಂದ ಯಾರೂ ಚಿಕ್ಕವರಾಗುವುದಿಲ್ಲ. ತಪ್ಪನ್ನು ಒಪ್ಪಿಕೊಳ್ಳಿ ಎಂದು ಅಶೋಕ್ ಆಗ್ರಹಿಸಿದರು.
ಸರ್ಕಾರದಿಂದ ಇದಕ್ಕೆ ಪ್ರತಿಕ್ರಿಯೆ ಬರದೇ ಇದ್ದಾಗ ಮುಖ್ಯಮಂತ್ರಿಯವರು ಕ್ಷಮೆ ಕೇಳುತ್ತಿಲ್ಲ 11 ಜನರ ಸಾವಿಗೆ ಸರ್ಕಾರವೇ ಹೊಣೆ. ಇದನ್ನು ಸರ್ಕಾರದ ಉತ್ತರವನ್ನು ವಿರೋಧಿಸಿ ನಾವು ಸಭಾತ್ಯಾ ಮಾಡುತ್ತಿದ್ದೇವೆ ಎಂದು ಹೇಳಿ ಹೊರ ನಡೆದರು. ಜೆಡಿಎಸ್-ಬಿಜೆಪಿ ಶಾಸಕರು ವಿರೋಧ ಪಕ್ಷದ ನಾಯಕರನ್ನು ಅನುಸರಿಸಿ ಹೊರನಡೆದರು.





