Mysore
20
clear sky

Social Media

ಶನಿವಾರ, 14 ಫೆಬ್ರವರಿ 2026
Light
Dark

ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಕೊಲೆ: ವಿ.ಸಿ.ಎನ್.ವೈದ್ಯರ ಕ್ಷೇಮಾಭಿವೃದ್ದಿ ಸಂಘ ಖಂಡನೆ

ಬೆಂಗಳೂರು: ಕೊಲ್ಕತ್ತಾ ವೈದ್ಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಗೈದು, ಹತ್ಯೆ ಮಾಡಿದವರಿಗೆ ಉಗ್ರ ಶಿಕ್ಷೆಯಾಗಬೇಕು ಮತ್ತು ಆಸ್ಪತ್ರೆ ಮೇಲೆ ದಾಂಧಲೆ ಮಾಡಿದವರನ್ನು ಸಹ ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿ.ಸಿ.ಎನ್.ಡಾಕ್ಟರ್ಸ್ ವೇಲ್ ಫೇರ್ ಅಸೋಸಿಯೇಷನ್ ಆಗ್ರಹಿಸಿದೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಡಾ.ಎಸ್. ರಾಜು, ಕಾರ್ಯದರ್ಶಿ ಬಿ.ಟಿ.ರಮೇಶ್, ಕೊಲ್ಕತ್ತಾ ಘಟನೆ ಅತ್ಯಂತ ಅಮಾನವೀಯವಾಗಿದ್ದು, ಈ ಷಡ್ಯಂತ್ರದ ಹಿಂದೆ ಇರುವವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು. ವೈದ್ಯಕೀಯ ಸಮೂಹದ ಮೇಲೆ ವಿಶ್ವಾಸ ಮೂಡುವ ರೀತಿಯಲ್ಲಿ ಸರ್ಕಾರ ಹೆಜ್ಜೆ ಇಡಬೇಕು ಎಂದು ಹೇಳಿದರು.

ಎಲ್ಲಾ ರೀತಿಯ ಆರೋಗ್ಯ ಸೇವಾ ಸೌಲಭ್ಯಗಳು ಮತ್ತು ಸರ್ಕಾರಿ, ಖಾಸಗಿ ಚಿಕಿತ್ಸಾಲಯಗಳು ಆರೋಗ್ಯ ಸೇವೆಯಲ್ಲಿ ನಿರತರಾಗಿರುವ ವೈದ್ಯರು, ಆರೋಗ್ಯ ಸಿಬ್ಬಂದಿಗೆ ಸೂಕ್ತ ಭದ್ರತೆ ಒದಗಿಸಬೇಕು. ವೈದ್ಯರು ದೇವರ ಸಮಾನವಾಗಿದ್ದು, ರೋಗಿಗಳ ಜೀವ ರಕ್ಷಿಸುವ ವೈದ್ಯರನ್ನು ಗೌರವದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಬೇಕು ಎಂದರು.
ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ, ಹಿಂಸೆ, ದಾಂಧಲೆ ನಡೆಯುತ್ತಿರುವುದು ವಿಷಾದಕರ. ದಾಳಿ, ಗಲಭೆ, ಅಹಿತಕರ ಘಟನೆಗಳನ್ನು ತಡೆಯಲು ಕೇಂದ್ರ ಸರ್ಕಾರ ರಚನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪೊಲೀಸ್ ಮತ್ತು ಆರೋಗ್ಯ ಇಲಾಖೆಯಿಂದ ಆರೋಗ್ಯ ಸಂಸ್ಥೆಗಳಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು. ಕರ್ತವ್ಯ ನಿರತ ವೈದ್ಯರನ್ನು ಗೌರವದಿಂದ ನೋಡಬೇಕು. ಆರೋಗ್ಯ ಕಾರ್ಯಕರ್ತರು ಎದುರಿಸುತ್ತಿರುವ ಅಪಾಯಗಳನ್ನು ಮತ್ತು ಸೇವೆಯಲ್ಲಿ ನಿರತರಾಗಿರುವವರಿಗೆ ರಕ್ಷಣೆ ನೀಡಲ ಕಠಿಣ ಕಾನೂನು ಜಾರಿಗೆಯಾಗಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ವೈದ್ಯರು ಯಾವುದೇ ಭಯವಿಲ್ಲದೇ ಕರ್ತವ್ಯ ನಿರ್ವಹಿಸಬೇಕು. ರೋಗಿಗಳ ಆರೈಕೆ ಮತ್ತು ಚಿಕಿತ್ಸೆ ನೀಡುವಾಗ ಜಾತಿ, ಧರ್ಮಗಳ ಬೇಧಭಾವವಿಲ್ಲದೇ ಕಾರ್ಯನಿರ್ವಹಿಸುತ್ತಾರೆ. ಎಂತಹ ಸಂದರ್ಭಗಳಲ್ಲೂ ತುರ್ತು ಮತ್ತು ಅಗತ್ಯ ಆರೋಗ್ಯ ಸೇವೆಗಳು ಮುಂದುವರೆಯತ್ತವೆ. ರೋಗಿಗಳ ತಕ್ಷಣ ಚಿಕಿತ್ಸೆ ನೀಡುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಸಂಘದ ಪದಾಧಿಕಾರಿಗಳಾದ ಡಾ|| ಭೋಜಮ್ಮ, ಡಾ|| ವೆಂಕಟರಾಮ್, ಡಾ|| ಚಂದ್ರಶೇಖರ್, ಡಾ|| ಚಂದ್ರಿಕಾ ಆನಂದ್, ಡಾ|| ಪ್ರೀತ್ ಶೆಟ್ಟಿ, ಡಾ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Tags:
error: Content is protected !!