ಬೆಂಗಳೂರು: ಮಹಾತ್ಮ ಗಾಂಧಿಜಿ ವಸ್ತ್ರೋದ್ಯಮ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಗಾಂಧಿವಾದಿ ಮತ್ತು ರಂಗಕರ್ಮಿ ಪ್ರಸನ್ನ ಎಂಬುವವರು ಮನವಿ ಪತ್ರ ಬರೆದಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರ ಬರೆದಿರುವ ಶಿವಮೊಗ್ಗ ಜಿಲ್ಲೆ ಹೆಗ್ಗೋಡು ಶ್ರಮಜೀವಿ ಆಶ್ರಮದ ಗಾಂಧಿವಾದಿ ಪ್ರಸನ್ನ ಅವರು ಕಳೆದ ಎರಡು ವರ್ಷಗಳ ಹಿಂದೆ ರಾಜ್ಯ ಸರ್ಕಾರ ಬಜೆಟ್ ಮಂಡನೆ ವೇಳೆ ಘೋಷಿಸಲಾಗಿತ್ತು. ಆದರೆ ಈ ಯೋಜನೆ ಚಾಲನೆಗೆ ಬಾರದೆ ನೆನೆಗುದಿಗೆ ಬಿದ್ದಿದೆ. ಅಲ್ಲದೇ ಈ ಯೋಜನೆಯು ಕರ್ನಾಟಕದಲ್ಲಿ ಗಾಂಧಿವಾದಿಗಳ ಕನಸಾಗಿದೆ ಹಾಗೂ ಗ್ರಾಮೀಣ ಬಡಜನತೆಯ ಬಡತನ ನಿವಾರಣೆಗಿರುವ ಒಂದು ಶಾಶ್ವತ ಪರಿಹಾರ ಕಾರ್ಯಕ್ರಮವಾಗಿದೆ. ವಸ್ತ್ರೋದ್ಯಮ ಎಂಬ ಸೀಮಿತ ಹೆಸರು ಈ ಯೋಜನೆಗೆ ಅಂಟಿಕೊಂಡಿದ್ದರೂ ಸಹ ಇದು ಎಲ್ಲ ಕುಶಲಕರ್ಮಿ ಕ್ಷೇತ್ರಗಳಿಗೆ ಮಾರುಕಟ್ಟೆ ಒದಗಿಸುವ ಮೂಲಕ, ಪುನರುಜ್ಜೀವನ ನೀಡಬಲ್ಲ, ಆದರೆ ಆದರೆ ಸರ್ಕಾರದ ಬೊಕ್ಕಸಕ್ಕೆ ವಿಪರೀತ ಹೊರೆಯೂ ಆಗಲಾರದ, ಒಂದು ಚುರುಕಾದ ಯೋಜನೆಯಾಗಿದೆ ಎಂದು ತಿಳಿಸಿದ್ದಾರೆ.
ಬಡಜನತೆಗೆ ರಿಸರ್ವೇಶನ್ ನೀಡುವುದು ಅಥವಾ ಗ್ಯಾರಂಟಿ ನೀಡುವುದು ಒಳ್ಳೆಯ ಕೆಲಸವೇ ಹೌದಾದರೂ ಸಮಸ್ಯೆಗೆ ಅದೊಂದು ತಾತ್ಕಾಲಿಕ ಪರಿಹಾರ ಮಾತ್ರ. ಇನ್ನು ರಾಜಕೀಯವಾಗಿ ನೋಡುವುದಾದರೆ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಸರಕಾರದ ವಿಶೇಷ ಛಾಪು ಮೂಡಿಸಲಾರವು. ತಮ್ಮ ವಿರೋಧಿಗಳು ತಮಗಿಂತಲೂ ಮಿಗಿಲಾಗಿ ಗ್ಯಾರಂಟಿ ಒದಗಿಸಲು ತುದಿಗಾಲ ಮೇಲೆ ನಿಂತಿರುವುದು ಈಗ ಸ್ಪಷ್ಟವಿದೆ. ಈ ಎಲ್ಲ ಉತ್ತಮಾಂಶಗಳ ನಡುವೆಯೂ ಮಹಾತ್ಮಗಾಂಧಿ ವಸ್ತ್ರೋದ್ಯಮ ಯೋಜನೆಯು ನೆನೆಗುದಿಗೆ ಬಿದ್ದಿದೆ. ಕಳೆದೆರಡು ವರ್ಷಗಳಿಂದ ಜನತೆಯ ಪರವಾಗಿ ನಾವುಗಳು ಅದೆಷ್ಟೋ ಬಾರಿ ಅಲೆದಾಡಿದರೂ ಸಂಬಂಧಪಟ್ಟ ಅಧಿಕಾರಿಗಳಿಗೆ ಇಚ್ಛಾಶಕ್ತಿಯ ಕೊರತೆಯಿರುವಂತೆ ಕಂಡು ಬರುತ್ತಿದೆ ಎಂದು ಹೇಳಿದ್ದಾರೆ.
ತಾವು ರಾಜಕೀಯ ಇಚ್ಛಾಶಕ್ತಿಯ ಒತ್ತಾಸೆ ನೀಡಿ ಯೋಜನೆಯು ಶೀಘ್ರವಾಗಿ ಹಾಗೂ ಸಮರ್ಪಕವಾಗಿ ಕಾರ್ಯಗತವಾಗುವಂತೆ ಮಾಡುತ್ತೀರಿ ಎಂಬ ನಂಬಿಕೆ ಇದ್ದು, ರಾಜ್ಯದ ಎಲ್ಲಾ ಗ್ರಾಮೀಣ ಕಾರ್ಯಕರ್ತರು ಹಾಗೂ ಗಾಂಧಿವಾದಿಗಳ ಪರವಾಗಿ, ನಾನು ಪತ್ರವನ್ನು ತಮಗೆ ಬರೆಯುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.





