ರಾಮನಗರ: ರಾಮನಗರ ರಾಮ ಪಾದಸ್ಪರ್ಶ ಮಾಡಿರುವ ಭೂಮಿ. ಜಿಲ್ಲೆಯಾದ ನಂತರ ಸಾಕಷ್ಟು ಅಭಿವೃದ್ಧಿ ಆಗಿದೆ. ಭೂಮಿ ಬೆಲೆ ಹೆಚ್ಚಾದರೆ ಎಲ್ಲರೂ ಮಾರಿಕೊಳ್ಳುತ್ತಾರೆ. ಹೀಗಾದರೆ ಮುಂದಿನ ಪೀಳಿಗೆಗೆ ನಾವು ಏನು ಮಾಡೋದು ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಪಕ್ಕದ ಜಿಲ್ಲೆಯಾದ ರಾಮನಗರದ ಹೆಸರನ್ನು ಬೆಂಗಳೂರು ದಕ್ಷಿಣ ಅಂತ ಮಾಡೋದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಶತ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಇದೀಗ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಿದರೆ ಯಾವುದೇ ಅನುಕೂಲ ಇಲ್ಲ. ಬ್ರ್ಯಾಂಡ್ ಬೆಂಗಳೂರಿನಲ್ಲಿಯೇ ಹಲವು ಸಮಸ್ಯೆಗಳಿವೆ. ಇನ್ನು ರಾಮನಗರವನ್ನು ಅಭಿವೃದ್ದಿ ಮಾಡಲು ಹೇಗೆ ಸಾಧ್ಯ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ರಾಮನಗರದ ಭೂಮಿಯಲ್ಲಿ ಬೆಳೆದ ಬೆಳೆಗೆ ಹೆಚ್ಚಿನ ಬೆಲೆ ಸಿಗುವ ಕಡೆ ಗಮನ ಕೊಡಬೇಕೇ ವಿನಃ ಈ ಭೂಮಿಗೆ ಬೆಲೆ ಕಟ್ಟುವ ನಿರ್ಧಾರಕ್ಕೆ ಕೈ ಹಾಕಬಾರದು ಎಂದು ಆಗ್ರಹಿಸಿದ್ದಾರೆ.
ಇನ್ನೂ ರಾಮನಗರಕ್ಕೆ ಮರು ನಾಮಕರಣ ಮಾಡದಂತೆ ಸಿಎಂ ಸಿದ್ದರಾಮಯ್ಯಗೆ ಡಾ.ಮಂಜುನಾಥ್ ಪತ್ರವನ್ನೂ ಬರೆದಿದ್ದಾರೆ.
ಶ್ರೀರಾಮಚಂದ್ರರು ತಮ್ಮ ವನವಾಸದ ಅವಧಿಯನ್ನು ಕಳೆದ ರೇಷ್ಮೆ ನಾಡು ರಾಮನಗರವನ್ನೇ ಬ್ರಾಂಡ್ ಮಾಡಿಕೊಂಡು ಅಭಿವೃದ್ಧಿ ಮಾಡುವತ್ತ ರಾಜ್ಯ ಸರ್ಕಾರ ಗಮನ ನೀಡಲಿ ಎಂದು ಸಂಸದ ಮಂಜುನಾಥ್ ಸಲಹೆ ನೀಡಿದ್ದಾರೆ.