ಬೆಂಗಳೂರು: ಬೆಳಗಾವಿಯ ಕಂಡಕ್ಟರ್ ಮೇಲಿನ ಪ್ರಕರಣದ ನಂತರ ಪೋಕ್ಸೋ ಕೇಸ್ ದಾಖಲಿಸಿದ್ದರು, ಆದರೆ ಅದು ಸುಳ್ಳು ಪೋಕ್ಸೋ ಕೇಸ್ ಆಗಿದೆ ಎಂದು ಮುಂಚೆಯೇ ಹೇಳಿದ್ದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಈ ಪ್ರಕರಣದ ಬಗ್ಗೆ ವರದಿ ಸಲ್ಲಿಸಿದ ಬಳಿಕ ಸಂತ್ರಸ್ಥ ಯುವತಿಯ ತಾಯಿ ಪೋಕ್ಸೋ ಕೇಸ್ ಸನ್ನು ಹಿಂಪಡೆದರುವ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕಿಯೆ ನೀಡಿದ ಅವರು, ದ್ವೇಷಕ್ಕಾಗಿ ಒತ್ತಡ ಹೇರಿ ಕಂಡಕ್ಟರ್ ಮೇಲೆ ಪೋಕ್ಸೋ ಕೇಸ್ ಹಾಕಿಸಿದ್ದರು. ಈ ಬಗ್ಗೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಹ ಪೋಕ್ಸ್ ಕೇಸ್ ಸರಿ ಇಲ್ಲ ಎಂದಿದ್ದರು. ಆದರೆ ಇದೀಗ, ಕೇಸ್ ದಾಖಲಿಸಿದ್ದವರೇ ಹಿಂಪಡೆದಿದ್ದಾರೆ ಎಂದು ಹೇಳಿದರು.
ಬೆಳಗಾವಿಯ ಕಂಡಕ್ಟರ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ(ಫೆ.24) ಬೆಳಗಾವಿಗೆ ಭೇಟಿ ನೀಡಿ, ಕಂಡಕ್ಟರ್ನ ಆರೋಗ್ಯ ವಿಚಾರಿಸಿದೆ. ಬಳಿಕ ಈ ಬಗ್ಗೆ ಅಧಿಕಾರಗಳೊಂದಿಗೆ ಸಭೆ ನಡೆಸಿದ್ದೇವೆ. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ 509 ಬಸ್ಸುಗಳು ಸಂಚರಿಸುತ್ತಿವೆ. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ 130 ಬಸ್ಗಳು ಸಂಚಾರ ಮಾಡುತ್ತಿವೆ. ಅವುಗಳಲ್ಲಿ ಒಂದು ಬಸ್ಗೆ ಮಾತ್ರ ನಮ್ಮಲ್ಲಿ ಮಸಿ ಬಳಿದಿದ್ದಾರೆ. ಇದಾದ ನಂತರ ಕನ್ನಡ ಸಂಘಟನೆಗಳು ಮಸಿ ಬಳಿದಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ಬಸ್ಗಳ ಮೇಲೆ ಮಸಿ ಬಳಿಯುವುದು, ನಿರ್ವಾಹಕರ ಮೇಲೆ ಮಸಿ ಬಳಿಯುತ್ತಿದ್ದಾರೆ. ಹೀಗಾಗಿ ಇವೆಲ್ಲಾ ವಿಚಾರಗಳನ್ನು ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇನೆ ಎಂದು ಮಾಹಿತಿ ನೀಡಿದರು.
ಇನ್ನು ನಮ್ಮ ರಾಜ್ಯದಿಂದ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಮಾಡುತ್ತಿಲ್ಲ. ಈ ಬಗ್ಗೆ ಅಲ್ಲಿನ ಸಿಎಸ್ ಮತ್ತು ಡಿಜಿಪಿ ಅವರೊಂದಿಗೆ ನಮ್ಮ ಸಿಎಸ್ ಚರ್ಚಿಸಿದ ನಂತರ ಅಲ್ಲಿಗೆ ಬಸ್ ಬಿಡುವ ಬಗ್ಗೆ ತೀರ್ಮಾನ ಮಾಡುತ್ತವೆ. ಮೊದಲು ನಮ್ಮ ರಾಜ್ಯದ ಡ್ರೈವರ್ ಮತ್ತು ಕಂಡಕ್ಟರ್ಗಳಿಗೆ ಅವರು ರಕ್ಷಣೆ ನೀಡಬೇಕು. ಅದಕ್ಕೆ ಪ್ರತಿಯಾಗಿ ಇಲ್ಲಿ ನಾವು ಅವರ ಡೈವರ್ ಮತ್ತು ಕಂಡಕ್ಟರ್ಗಳಿಗೆ ರಕ್ಷಣೆ ನೀಡುತ್ತೇವೆ ಎಂದು ತಿಳಿಸಿದರು.





