ಬೆಂಗಳೂರು: ಭಾರತದ ಆರ್ಥಿಕತೆಯಲ್ಲಿ ರಕ್ಷಣಾ ಉದ್ಯಮದ ಪಾಲುದಾರಿಕೆಯನ್ನು ಹೆಚ್ಚಿಸುವ ಗುರಿಯೊಂದಿಗೆ, ರಕ್ಷಣಾ ಕ್ಷೇತ್ರದಲ್ಲಿ ಖಾಸಗಿ ಭಾಗೀದಾರಿಕೆಯನ್ನು ಕೇಂದ್ರ ಸರ್ಕಾರ ಉತ್ತೇಜಿಸುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಫೆಬ್ರವರಿ.10) ನಡೆಯುತ್ತಿರುವ ಏರೋ ಇಂಡಿಯಾ 2025ರ ಸಿಇಒ ದುಂಡು ಮೇಜಿನ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಖಾಸಗಿ ರಕ್ಷಣಾ ಕೈಗಾರಿಕಾ ವ್ಯವಸ್ಥೆಯ ಉತ್ಪನ್ನಗಳ ಬಳಕೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಅಲ್ಲದೇ ಈ ಉತ್ಪನ್ನಗಳ ತಯಾರಿಕೆಗೆ ಹಾಗೂ ರಫ್ತಿಗೆ ಅನುಮತಿ ನೀಡುತ್ತದೆ ಎಂದರು.
ಭಾರತವನ್ನು 2047ರ ವೇಳೆಗೆ ಅಭಿವೃದ್ಧಿ ಹೊಂದುತ್ತಿರುವ ದೇಶದಿಂದ, ಅಭಿವೃದ್ಧಿ ಹೊಂದಿದ ದೇಶಕ್ಕೆ ಪರಿವರ್ತನೆ ಮಾಡುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಹಾಗಾಗಿ ಅದಕ್ಕೆ ಪೂರಕವಾಗಿ ತಮ್ಮ ರಕ್ಷಣಾ ಉದ್ಯಮವನ್ನು ಒಟ್ಟಾರೆ ರಾಷ್ಟ್ರೀಯ ಆರ್ಥಿಕತೆಯ ಮುಖ್ಯ ಪಾಲುದಾರ ಕ್ಷೇತ್ರವನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಹಲವು ಪರಿವರ್ತಕ ಕ್ರಮಗಳನ್ನು ತೆಗೆದುಕೊಂಡಿದಡ ಎಂದು ಹೇಳಿದರು.
ಇನ್ನೂ ರಕ್ಷಣಾ ಕ್ಷೇತ್ರದಲ್ಲಿ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಪರಿಕಲ್ಪನೆಯನ್ನು ಉತ್ತೇಜಿಸಲು ಹಾಗೂ ರಕ್ಷಣಾ ವಲಯಕ್ಕೆ ಹಣಕಾಸಿನ ನೆರವು ನೀಡಲು, ರಕ್ಷಣಾ ಪರೀಕ್ಷಾ ಮೂಲಸೌಕರ್ಯ ಯೋಜನೆಯನ್ನು ಪರಿಚಯಿಸಲಾಗಿದೆ. ಭಾರತವು ರಕ್ಷಣಾ ರಫ್ತು ವಹಿವಾಟವು 2013-14ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ, ಕಳೆದ 10 ವರ್ಷಗಳಲ್ಲಿ ಶೇ. 31 ಪಟ್ಟು ಬೆಳವಣಿಗೆಯನ್ನು ಕಂಡಿದೆ ಎಂದು ಮಾಹಿತಿ ನೀಡಿದರು.
ವಿಶ್ವದಲ್ಲಿ ಆಧುನಿಕ ಯುದ್ಧದ ಸ್ವರೂಪವು ವೇಗವಾಗಿ ಬದಲಾಗುತ್ತಿರುವುದರಿಂದ, ನಾವು ಇದಕ್ಕೆ ಪರಿಹಾರಗಳನ್ನು ಸಹ ಅಷ್ಟೇ ವೇಗವಾಗಿ ಅಳವಡಿಸಿಕೊಳ್ಳಬೇಕು. ಜೊತೆಗೆ ಶುದ್ಧ ಹಾರ್ಡ್ವೇರ್ ಆಧಾರಿತ ಸಿಸ್ಟಮ್ ಮೇಲೆ ಅವಲಂಬಿತವಾಗಿದ್ದ ಈ ಮೊದಲಿನ ಯುದ್ಧ ವ್ಯವಸ್ಥೆಯು, ಇದೀಗ ಸಾಫ್ಟ್ವೇರ್ ಆಧಾರಿತ ವ್ಯವಸ್ಥೆಗಳಿಗೆ ಒಗ್ಗಿಕೊಳ್ಳುತ್ತಿದೆ. ಹೀಗಾಗಿ ಬಾಹ್ಯಾಕಾಶ-ಆಧಾರಿತ ಸಂಚರಣೆ ವ್ಯವಸ್ಥೆ, ಬಾಹ್ಯಾಕಾಶ-ಆಧಾರಿತ ಸಂವಹನ ಮತ್ತು ಕಣ್ಗಾವಲು ವ್ಯವಸ್ಥೆಯೇ ನಮ್ಮ ಕಾರ್ಯಾಚರಣೆಯ ಭಾಗವಾಗಿದೆ ಎಂದರು.





