ಬೆಳಗಾವಿ: ವಕ್ಫ್ ಹೆಸರಿನಲ್ಲಿ ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ವಿಪಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಈ ಕುರಿತು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತಾರೂಢ ಕಾಂಗ್ರೆಸ್ ಬ್ರಿಟೀಷರ ಒಡೆದು ಆಳುವ ನೀತಿಯನ್ನು ಅಳವಡಿಸಿಕೊಂಡು ಹಿಂದೂ-ಮುಸ್ಲಿಂರ ನಡುವೆ ಬಿರುಕು ಮೂಡಿಸುತ್ತಿದೆ.
ಹಿಂದೂಗಳ ಆಸ್ತಿಯನ್ನು ಕಾಂಗ್ರೆಸ್ ಒಡೆಯುತ್ತಿದೆ. ಸಮಾಜದಲ್ಲಿ ಕಾಂಗ್ರೆಸ್ ವಕ್ಫ್ ಮೂಲಕ ಸಾಮರಸ್ಯ ಕೆಡಿಸುತ್ತಿದೆ. ವಕ್ಫ್ ನೋಟಿಸ್, ಪಹಣಿ ಗೊಂದಲ ನಿವಾರಣೆ ಮಾಡಬೇಕು. ಆಯಾಯ ರೈತರ ಹೆಸರಿಗೆ ಮತ್ತೆ ಪಹಣಿ ಬದಲಾವಣೆ ಆಗಬೇಕು. 1974ರ ವಕ್ಫ್ ಗೆಜೆಟ್ ಅಧಿಸೂಚನೆ ವಾಪಸ್ಸು ಪಡೆಯಬೇಕು. ಕೇಂದ್ರದ ವಕ್ಫ್ ತಿದ್ದುಪಡಿ ನಿಯಮಾವಳಿಗಳನ್ನು ನಮ್ಮ ರಾಜ್ಯ ಸರಳ ಬಹುಮತದಲ್ಲಿ ಪಾಸ್ ಮಾಡಬೇಕು ಎಂದು ಆಗ್ರಹಿಸಿದರು.
ಇನ್ನು ವಕ್ಫ್ ಬೋರ್ಡ್ ಮೂಲಕ ಕಾಂಗ್ರೆಸ್ ಸರ್ಕಾರವು ಹಿಂದೂಗಳ ಭೂಮಿ, ದೇವಸ್ಥಾನಗಳು ಮತ್ತು ಸ್ಮಶಾನ ಭೂಮಿಯನ್ನು ಕಬಳಿಸುತ್ತಿದೆ. ಬ್ರಿಟಿಷರ ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದ್ದು, ಹಿಂದು-ಮುಸಲ್ಮಾನರ ನಡುವೆ ಕೋಮು ಸೌಹಾರ್ದತೆ ಸೃಷ್ಟಿಸುತ್ತಿದೆ. ರೈತರ ಪಹಣಿಗಳಲ್ಲಿ ವಕ್ಫ್ ಎಂಬ ಉಲ್ಲೇಖವನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಐತಿಹಾಸಿಕ ದೇವಾಲಯಗಳು, ಗೋಮಾಳಗಳು, ಶಾಲೆಗಳು ಮತ್ತು ಸಮಾಧಿ ಸ್ಥಳಗಳು ವಕ್ಫ್ ಆಸ್ತಿಯಾಗುತ್ತಿವೆ. ರಾತ್ರೋರಾತ್ರಿ ಪಹಣಿಗಳು ಬದಲಾಗುತ್ತಿವೆ ಎಂದು ಆರೋಪಿಸಿದರು.
ಇನ್ನು ವಕ್ಫ್ನಿಂದ ರೈತರಿಗೆ ನೋಟಿಸ್ ವಿಚಾರವಾಗಿ ಸದನದಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ ಹಾಗೂ ನನ್ನ ನಡುವೆ ವಾಕ್ಸಮರ ನಡೆದಿದೆ. ವಕ್ಫ್ ಬೋರ್ಡ್ ನೋಟಿಸ್ ಕೊಟ್ಟಿರೋದು ತಪ್ಪಿಲ್ಲ ಅಂದರೆ ನಾನು ಪ್ರತಿಪಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಗೆ ನಿಲ್ಲುತ್ತೇನೆ. ಬೇಕಿದ್ರೆ ಸ್ಪೀಕರ್ ನನಗೆ ಛೀಮಾರಿ ಹಾಕಲಿ ಎಂದು ಸವಾಲು ಹಾಕಿದರು.





