Mysore
27
broken clouds

Social Media

ಸೋಮವಾರ, 18 ಮೇ 2026
Light
Dark

ರಾಜ್ಯದಲ್ಲಿ ಕಾವು ಪಡೆದುಕೊಂಡ ಡಿನ್ನರ್‌ ಮೀಟಿಂಗ್‌ ವಿಚಾರ: ಟ್ವೀಟ್‌ನಲ್ಲಿ ಆರ್.‌ಅಶೋಕ್‌ ಲೇವಡಿ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಡಿನ್ನರ್‌ ಮೀಟಿಂಗ್‌ ವಿಚಾರ ಕಾವು ಪಡೆದುಕೊಂಡಿದ್ದು, ಸಚಿವ ಕೆ.ಎನ್‌.ರಾಜಣ್ಣ ಅವರು ಕೆಪಿಸಿಸಿ ಅಧ್ಯಕ್ಷರಿಗೆ ಬಹಿರಂಗ ಸವಾಲು ಹಾಕಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಲೇವಡಿ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು,ಅತ್ತ ಕಾಂಗ್ರೆಸ್ ಹೈಕಮಾಂಡ್ ತಮ್ಮ ಜೇಬಿನಲ್ಲಿದೆ ಎನ್ನುವ ರೀತಿ ಗೃಹ ಸಚಿವ ಪರಮೇಶ್ವರ್ ಅವರ ಡಿನ್ನರ್ ಮೀಟಿಂಗ್ ಅನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ದೆಹಲಿಯಲ್ಲೇ ಕೂತು ಕ್ಯಾನ್ಸಲ್ ಮಾಡಿಸಿದ್ದಾರೆ. ಆದರೆ ಇತ್ತ ಸಿಎಂ ಸಿದ್ದರಾಮಯ್ಯ ಬಣ ನಾವೇನು ಕಡಿಮೆ ಇಲ್ಲ ಎನ್ನುವಂತೆ ಕೌಂಟರ್ ಕೊಡುತ್ತಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

ಇನ್ನೂ ಸಚಿವ ಕೆ.ಎನ್.ರಾಜಣ್ಣ ಅವರೇ ಸ್ವತಃ ಕೆಪಿಸಿಸಿ ಅಧ್ಯಕ್ಷರಿಗೆ ಬಹಿರಂಗ ಸವಾಲು ಹಾಕಿದ್ದು, ಡಿನ್ನರ್ ಮೀಟಿಂಗ್ ಬಗ್ಗೆ ಬೇಜಾರು ಮಾಡಿಕೊಳ್ಳೋಕೆ ನಾವೇನು ಅವರ ಆಸ್ತಿ ಬರೆಸಿಕೊಂಡಿದ್ದೀವಾ?
ಇವರೇನು SC/ST ವಿರೋಧಿಗಳಾ? ಇವೆಲ್ಲಾ ಬಹಳ ದಿವಸ ನಡೆಯಲ್ಲವೆಂಬಂತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಯಾರ ಜೇಬಿನಲ್ಲಿದೆಯೋ, ಕಾಂಗ್ರೆಸ್ ಹೈಕಮಾಂಡ್ ಜೇಬು ತುಂಬಿಸುತ್ತಿರುವುದು ಯಾರೋ ಗೊತ್ತಿಲ್ಲ. ಆದರೆ ಸೇರಿಗೆ ಸವಾಸೇರು ಎಂದು ಕುರ್ಚಿಗಾಗಿ ನಡೆಸುತ್ತಿರುವ ಈ ಪೈಪೋಟಿ ಮತ್ತು ಆಸಕ್ತಿಯನ್ನು ಕಾಂಗ್ರೆಸ್‌ ಸಚಿವರು ತಮ್ಮ ಇಲಾಖೆಯ ಕಾರ್ಯ ನಿರ್ವಹಣೆಯಲ್ಲಿ, ರಾಜ್ಯದ ಅಭಿವೃದ್ಧಿಯಲ್ಲಿ ತೋರಿಸಿದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಲೇವಡಿ ಮಾಡಿದ್ದಾರೆ.

Tags:
error: Content is protected !!