ಬೆಳಗಾವಿ: ಡಿಸೆಂಬರ್.16ರಂದು ಇಡೀ ದಿನ ಸುವರ್ಣ ಸೌಧದ ಮುಂದೆ ಧರಣಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸ್ವಾಮೀಜಿ ಅವರು, ಪಂಚಮಸಾಲಿ ಸಮಾಜದವರು ಶಾಂತಿಯುತವಾಗಿ ಹೋರಾಟ ನಡೆಸಿದ್ದೆವು. ಸಾರ್ವಜನಿಕರ ವೇಷದಲ್ಲಿ ಬಂದ ಪೊಲೀಸರೇ ನಮ್ಮವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸಮವಸ್ತ್ರದಲ್ಲಿದ್ದವರು ಲಾಠಿಚಾರ್ಜ್ ನಡೆಸಿದ್ದಾರೆ. ಇದು ವ್ಯವಸ್ಥಿತ ಷಡ್ಯಂತ್ರ ಎಂದು ಕಿಡಿಕಾರಿದರು.
ಹೋರಾಟ ನಿಯಂತ್ರಣ ತಪ್ಪುವ ಸಾಧ್ಯತೆಯಿದ್ದರೆ ಜಲಫಿರಂಗಿ ಬಳಸಬಹುದಿತ್ತು. ಲಾಠಿಚಾರ್ಜ್ ಮಾಡಲೇಬೇಕು ಎಂದು ಏಕೆ ನಿರ್ಧರಿಸಿದರು? ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಲಾಠಿಚಾರ್ಜ್ ಆದೇಶ ನೀಡಿದ್ದಾರೆ. ಅವರು ಆದೇಶ ನೀಡಿಲ್ಲ ಎಂದರೆ ಸಂಬಂಧಿಸಿದ ಪೊಲೀಸ್ ಅಧಿಕಾರಿಯನ್ನು ಅಮಾನತ್ತು ಮಾಡಲಿ ಎಂದು ಆಗ್ರಹಿಸಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಈವರೆಗಿನ ಯಾವುದೇ ಸರ್ಕಾರ ಲಿಂಗಾಯತರ ಮೇಲೆ ದಾಳಿ ಮಾಡಿರಲಿಲ್ಲ. ಸಿದ್ದರಾಮಯ್ಯ ಅವರೇ ಲಿಂಗಾಯತರ ಮೇಲೆ ಲಾಠಿ ಎತ್ತಿದ ಮೊದಲ ಸಿಎಂ. ಇವರೊಬ್ಬ ಲಿಂಗಾಯತ ವಿರೋಧಿ ನಾಯಕ ಎಂದು ವಾಗ್ದಾಳಿ ನಡೆಸಿದರು.





