Mysore
27
clear sky

Social Media

ಮಂಗಳವಾರ, 07 ಏಪ್ರಿಲ 2026
Light
Dark

ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ : ಡಿಸಿಎಂ ಡಿಕೆಶಿ

ಬೆಂಗಳೂರು : ಅಡುಗೆ ಅನಿಲ, ಪೆಟ್ರೋಲ್‌, ಡೀಸೆಲ್ ಬೆಲೆ  ಏರಿಕೆ ಖಂಡಿಸಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಏಪ್ರಿಲ್‌ 17ರಂದು ರಾಜ್ಯ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಸಲಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದರು.

ಇಂದು(ಏ.10) ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯವರು ಈಗಾಗಲೇ ʼಜನಾಕ್ರೋಶ ಯಾತ್ರೆʼ ನಡೆಸುತ್ತಿದ್ದಾರೆ. ಅದು ಅವರದ್ದೇ ಕೇಂದ್ರ ಸರ್ಕಾರದ ವಿರುದ್ಧ ಅವರು ನಡೆಸುತ್ತಿರುವ ಯಾತ್ರೆ. ನಮ್ಮ ಸರ್ಕಾರದ ವಿರುದ್ಧ ಪ್ರತಿಭಟಿಸಲು ಅವರಿಗೆ ಏನೂ ವಿಷಯವಿಲ್ಲ. ನಾವು ಜನರು ಬದುಕು ಕಟ್ಟಿಕೊಳ್ಳಲೆಂದು, ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದಾರೆಂದು 52 ಸಾವಿರ ಕೋಟಿ ಬಜೆಟ್‌ನಲ್ಲಿಟ್ಟು ಜನರಿಗೆ ಪಂಚ ಗ್ಯಾರಂಟಿಗಳ ಮೂಲಕ ಸಹಾಯ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಬಿಜೆಪಿಗರ ಆಂತರಿಕ ಕಚ್ಚಾಟ ಹಾಗೂ ಕೇಂದ್ರ ಸರ್ಕಾರದ ನೀತಿಗಳು ಎಲ್ಲಾ ವರ್ಗದ ಜನರಿಗೂ ಹೊಡೆತ ನೀಡಿದೆ. ಯಾವ ವರ್ಗವೂ ಇದರ ಹೊರತಾಗಿಲ್ಲ. ಈ ಗುಣಗಾನಗಳನ್ನು ಸಾಮಾನ್ಯ ಜನರ ಬಳಿಯೇ ಕೇಳಬೇಕು ಎಂದು ವ್ಯಂಗ್ಯವಾಡಿದರು.

ನಿನ್ನೆ ಕಚ್ಛಾ ತೈಲದ ಬೆಲೆ 4.3ರಷ್ಟು ಇಳಿಕೆಯಾಗಿದೆ. ಆದರೂ ಕೇಂದ್ರ ಸರ್ಕಾರ ಯಾಕೆ ಇಂಧನ ಬೆಲೆ ಇಳಿಸಿಲ್ಲ? ಪೆಟ್ರೋಲ್‌ ಮೂಲ ಬೆಲೆ ಪ್ರತಿ ಲೀಟರ್‌ಗೆ 42.60 ರೂ. ಇದೆ. ತೆರಿಗೆ ಹೆಚ್ಚಿಸಿ 103 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಒಂದು ಲೀಟರ್‌ಗೆ 60 ರೂ. ಲಾಭ ಕೇಂದ್ರಕ್ಕೆ ಸಿಗುತ್ತಿದೆ. ಡೀಸೆಲ್‌ ಬೆಲೆ 92 ರೂ. ಇದೆ. 43 ರೂ. ಲಾಭ ಅವರಿಗೆ ಸಿಗುತ್ತಿದೆ. ತೈಲ ಬೆಲೆಯ ಮೇಲೆ 60% ತೆರಿಗೆ ಹಾಕುತ್ತಿದ್ದಾರೆ. ‌43 ಲಕ್ಷ ಕೋಟಿ ರೂ. ಅವರು ಈ ಮೂಲಕ ಲೂಟಿ ಹೊಡೆಯುತ್ತಿದ್ದಾರೆ. ತಮ್ಮ ಯಾತ್ರೆ ಕೇಂದ್ರ ಸರ್ಕಾರದ ವಿರುದ್ಧದ ಯಾತ್ರೆ ಎಂದು ರಾಜ್ಯ ಬಿಜೆಪಿಯವರು ಬೋರ್ಡ್‌ ಹಾಕಿಕೊಂಡು ಯಾತ್ರೆ ಮಾಡಬೇಕು ಎಂದರು.

ನಾವು ಹಾಲಿನ ಬೆಲೆ ಏರಿಸಿದ್ದು ರೈತರ ಬದುಕು ಹಸನುಗೊಳಿಸಲು. ಕೇಂದ್ರದಿಂದ ಬೂಸಾ, ಇಂಡಿ ಬೆಲೆ ಏಕೆ ಕಡಿಮೆ ಮಾಡಿಸಲು ಆಗಿಲ್ಲ? ಕೇಂದ್ರದಿಂದಲೇ ಎಲ್ಲಾ ಬೆಲೆಯನ್ನು ಹೆಚ್ಚಿಸಿ, ಈಗ ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ನಡೆಸಿದರೆ ಅರ್ಥವಿದೆಯೇ? ಎಂದು ಪ್ರಶ್ನಿಸಿದರು.

ನಮ್ಮಲ್ಲಿ ಹಾಲು ಪ್ರತಿ ಲೀಟರ್‌ಗೆ 42 ರೂ. ಇದೆ. ಆದರೆ, ಕೇರಳದಲ್ಲಿ 52, ಮಹಾರಾಷ್ಟ್ರ 52, ತೆಲಂಗಾಣ 58, ಅಸ್ಸಾಂ 60, ಹರಿಯಾಣ 56, ಮಧ್ಯಪ್ರದೇಶ 52, ಪಂಜಾಬ್‌ 56, ಉತ್ತರ ಪ್ರದೇಶ 56, ಗುಜರಾತ್ 53‌ ರೂ. ಇದೆ. ನಾವು ರೈತರ ಉಳಿಸಲಿಕ್ಕಾಗಿ ಹಾಲಿನ ಬೆಲೆ ಏರಿಸುವ ತೀರ್ಮಾನ ಕೈಗೊಂಡಿದ್ದೇವೆ ಎಂದು ಹೇಳಿದರು.

Tags:
error: Content is protected !!