Mysore
30
clear sky

Social Media

ಶುಕ್ರವಾರ, 13 ಫೆಬ್ರವರಿ 2026
Light
Dark

ಈ ದೇಶದ ಸಂವಿಧಾನ ನಮ್ಮ, ನಿಮ್ಮ ಸಂವಿಧಾನವಾಗಿದ್ದು ಇದಕ್ಕಿಂತ ದೊಡ್ಡದು ಯಾವುದು ಇಲ್ಲ: ಪ್ರಿಯಾಂಕಾ ಗಾಂಧಿ

ಬೆಳಗಾವಿ: ಭಾರತ ದೇಶದ ಸಂವಿಧಾನ ನಮ್ಮ ಮತ್ತು ನಿಮ್ಮ ಸಂವಿಧಾನವಾಗಿದ್ದು, ನಿಮ್ಮೆಲ್ಲರ ಜೀವನದಲ್ಲಿ ಇದಕ್ಕಿಂತ ದೊಡ್ಡದು ಯಾವುದು ಇಲ್ಲ ಎಂದು ಸಂಸದೆ ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಇಂದು(ಜನವರಿ.21) ಕಾಂಗ್ರೆಸ್‌ ವತಿಯಿಂದ ಆಯೋಜಿಸಲಾಗಿದ್ದ ಜೈ ಬಾಪು, ಜೈ ಭೀಮ್‌, ಜೈ ಸಂವಿಧಾನ ಸಮಾವೇಶದಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ನೀಡಿದ ಸಂವಿಧಾನವೂ ದೇಶದ ಪ್ರತಿಯೊಬ್ಬ ಪ್ರಜೆಯನ್ನು ಅನ್ಯಾಯದಿಂದ ರಕ್ಷಿಸುತ್ತದೆ. ಸಂವಿಧಾನವೇ ನಿಮಗೆ ನ್ಯಾಯದ ಅಧಿಕಾರ, ಶಿಕ್ಷಣದ ಅಧಿಕಾರ, ಆಹಾರದ ಅಧಿಕಾರ, ಧ್ವನಿ ಎತ್ತುವ ಅಧಿಕಾರ ಹಾಗೂ ಸರ್ಕಾರದ ವಿರುದ್ಧ ಹೋರಾಡುವ ಅಧಿಕಾರ ನೀಡುತ್ತದೆ ಎಂದು ಹೇಳಿದರು.

ಬೆಳಗಾವಿಯ ಪುಣ್ಯ ಭೂಮಿ ದೇಶವಾಸಿಗಳಿಗೆ ಹೆಮ್ಮೆಯ ಭೂಮಿಯಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ಎಲ್ಲ ಸದಸ್ಯರಿಗೆ ಇದು ಪವಿತ್ರ ಭೂಮಿಯಾಗಿದೆ. ಇದೇ ಪುಣ್ಯ ಭೂಮಿಯಲ್ಲೇ ಬಾಲಗಂಗಾಧರ ತಿಲಕ್ ಅವರು ತಮ್ಮ ಚಳವಳಿ ಆರಂಭಿಸಿದ್ದರು. ಅಲ್ಲದೇ ಇದೇ ಪುಣ್ಯ ಭೂಮಿಯಲ್ಲೇ 100 ವರ್ಷಗಳ ಹಿಂದೆ ಮಹಾತ್ಮ ಗಾಂಧೀಜಿಯವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷತೆ ವಹಿಸಿಕೊಂಡಿದ್ದರು ಎಂದರು.

ಹಿಂದಿನ ಕಾಲದಲ್ಲಿ ಯಾವುದಾದರು ಒಂದು ದೊಡ್ಡ ಸಾಮ್ರಾಜ್ಯವನ್ನು ಬೀಳಿಸಬೇಕು ಎಂದರೆ ಅದರಲ್ಲಿ ದೊಡ್ಡಮಟ್ಟದ ಹಿಂಸಾಚಾರ ನಡೆಯುತಿತ್ತು, ಜೊತೆಗೆ ನೆತ್ತರು ನದಿಯಂತೆ ಹರಿಯುತ್ತಿತ್ತು. ಆದರೆ ಸತ್ಯ ಹಾಗೂ ಅಹಿಂಸಾ ತತ್ವಗಳ ಆಧಾರದ ಮೇಲೆ ನಡೆದ ನಮ್ಮ ಸ್ವಾತಂತ್ರ್ಯ ಹೋರಾಟ ಜಾಗತಿಕ ಮನ್ನಣೆ ಪಡೆಯಿತು ಎಂದು ತಿಳಿಸಿದರು.

ಇನ್ನೂ ಸುವರ್ಣಸೌಧದಲ್ಲಿ ನಾನೊಂದು ಚಿತ್ರ ನೋಡಿದೆ. ಆ ಚಿತ್ರದಲ್ಲಿ ಅನುಭವ ಮಂಟಪವಿದ್ದು, ಅಲ್ಲಿ ಬಸವಣ್ಣ ಕುಳಿತಿರುತ್ತಾರೆ, ಅವರ ಎದುರಿಗೆ ಅಕ್ಕಮಹಾದೇವಿ ಅವರು ನಿಂತಿರುತ್ತಾರೆ. ಈ ಚಿತ್ರ ಕರ್ನಾಟಕದ ಪ್ರಜಾಪ್ರಭುತ್ವ ವ್ಯವಸ್ಥೆಯ ಪರಂಪರೆಯನ್ನು ಹೇಳುತ್ತದೆ. ಆ ಚಿತ್ರದಲ್ಲಿ ನಾವು ಪ್ರಜಾಪ್ರಭುತ್ವದ ಮೂಲಗಳನ್ನು, ಸಭೆಯಲ್ಲಿನ ಪ್ರಜೆಗಳ ಸಮಾನ ಪಾಲ್ಗೊಳ್ಳುವಿಕೆಯನ್ನು ನೋಡಬಹುದು. ಇದೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮೂಲವಾಗಿದೆ ಎಂದು ಹೇಳಿದರು.

ಪ್ರಸಕ್ತ ಕೇಂದ್ರ ಸರ್ಕಾರ ದಿನ ನಿತ್ಯ ಸಂವಿಧಾನದ ವಿರುದ್ಧ ಆಕ್ರಮಣ ಮಾಡುತ್ತಿದೆ. ಈ ಸಂವಿಧಾನವೇ ನಿಮ್ಮ ರಕ್ಷಣೆ ಮಾಡಲು ಸಾಧ್ಯ. ಅಲ್ಲದೇ ಕೇಂದ್ರ ಸರ್ಕಾರ ತಮ್ಮ ರಾಜಕೀಯಕ್ಕಾಗಿ ಅಧಿಕಾರಕ್ಕಾಗಿ ಸಂವಿಧಾನವನ್ನು ದುರ್ಬಲಗೊಳಿಸಲಾಗುತ್ತಿದೆ. ಜೊತೆಗೆ  ಸಂವಿಧಾನ ಬದಲಿಸುವ, ನಾಶ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

Tags:
error: Content is protected !!