ಬೆಂಗಳೂರು: ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಮೃತರ ಕುಟುಂಬದೊಂದಿಗೆ ಮಾತನಾಡಿದ್ದೇನೆ. ಪಾರದರ್ಶಕವಾಗಿ ತನಿಖೆ ನಡೆಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ನಾನು ಸಚಿನ್ ಕುಟುಂಬದವರಿಗೆ ಭರವಸೆ ನೀಡಿದ್ದೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಜನವರಿ.4) ಗುತ್ತಿಗೆದಾರ ಸಚಿನ್ ಪ್ರಕರಣವಾಗಿ ಬಿಜೆಪಿಯವರು ಮಾಡುತ್ತಿರುವ ಪ್ರತಿಭಟನೆ ಹಾಗು ಟೀಕಾರೋಪಗಳಿಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಹೇಳಿದಂತೆಲ್ಲಾ ಕುಣಿಯಲು ಸಾಧ್ಯವಿಲ್ಲ. ಅವರಿಗೆ ಸಿಬಿಐ ಮೇಲೆ ಯಾಕಷ್ಟು ಪ್ರೀತಿ ಎಂದು ತಿಳಿಯುತ್ತಿಲ್ಲ. ನಾವು ರಾಜ್ಯದಲ್ಲಿ ಸ್ಕ್ರಿಪ್ಟ್ ನಟನೆ ಮಾಡಲು ಆಗುವುದಿಲ್ಲ. ಒಂದು ಜೀವ ಹೋಗಿದೆ, ಅದಕ್ಕೆ ನ್ಯಾಯ ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿದ್ದಾರೆ.
ಇನ್ನು ಬಿಜೆಪಿಯವರು, ಸಚಿನ್ ಕುಟುಂಬದವರಿಗೆ ನಮ್ಮ ಸರ್ಕಾರ ವಿರುದ್ಧ ಹೇಳಿಕೆ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಆದರೆ ಈ ಪ್ರಕರಣದಲ್ಲಿ ರಾಜಕೀಯ ಬೆರೆಸುತ್ತಿರುವುದು ತಪ್ಪಲ್ಲವೇ? ಹೆಣ ಬಿದ್ದರೆ ಸಾಕು, ಬಿಜೆಪಿಯವರಿಗೆ ಸಂಭ್ರಮ ಅನ್ನಿಸುತ್ತದೆ. ಏನೇ ಆಗಲಿ ಸಚಿನ್ ಕುಟುಂಬಕ್ಕೆ ಪಾರದರ್ಶಕವಾಗಿ ನ್ಯಾಯ ಕೊಡಿಸುವ ಜವಾಬ್ದಾರಿ ಸರ್ಕಾರದ್ದು ಎಂದಿದ್ದಾರೆ.
ಕಲಬುರ್ಗಿಯಲ್ಲಿ ಸುಪಾರಿ ಮಾಡಿಕೊಂಡು ಬಂದಿಲ್ಲ ನಾವು. ಚಂದು ಪಾಟೀಲ ಯಾರು? ಸುಪಾರಿ ಕೊಡಲು ನಮಗೆ ಬೇರೆ ಕೆಲಸ ಇಲ್ಲವಾ? ಇತ್ತೀಚೆಗೆ ಬಿಜೆಪಿ ರಾಜಾಧ್ಯಕ್ಷರದ್ದು ಅತಿ ಆಗುತ್ತಿದೆ. ನಮ್ಮ ತಂದೆಯವರಿಗೆ ಗೌರವ ನೀಡಿ, ನಾನು ಸಮ್ಮನೆ ಇದ್ದೇನೆ ಅಷ್ಟೇ. ನಾವು ಬೀದಿಗೆ ಇಳಿದರೆ ನೀವು ಮನೆ ಸೇರಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.




