ಬೆಂಗಳೂರು: ಅಧಿಕಾರ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿ ಇರಬೇಕು ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಸಚಿವ ರಾಜಣ್ಣ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಮಾತಿನ ಸಮರ ನಡೆಯುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ರಾಜಣ್ಣ ಅವರ ಅಭಿಪ್ರಾಯ ಹೇಳಿದ್ದಾರೆ. ಅದರ ಬಗ್ಗೆ ನಾನು ಮಾತನಾಡೋಕೆ ಹೋಗಲ್ಲ. ಹೈಕಮಾಂಡ್ ಅಂತಿಮವಾಗಿ ತೀರ್ಮಾನ ಮಾಡಲಿದೆ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ. ನನ್ನನ್ನು ಸೇರಿದಂತೆ ಎಲ್ಲರಿಗೂ ಹೈಕಮಾಂಡ್ ತೀರ್ಮಾನ ಅನ್ವಯ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ನಗರ ಪ್ರದೇಶ, ಮುನಿಸಿಪಾಲಿಟಿಗಳಲ್ಲಿ ನಗರಾಭಿವೃದ್ಧಿ ವ್ಯಾಪ್ತಿಯ ಆಸ್ತಿಗಳಿಗೆ ಬಿ ಖಾತಾ ಅಭಿಯಾನ ಶುರು ಮಾಡಿದ್ದೇವೆ. ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಸಮಿತಿ ಮಾಡಿದ್ದು, ಸಮಿತಿ ವರದಿ ಕೊಟ್ಟ ಮೇಲೆ ರಾಜ್ಯದಲ್ಲಿ ಒಂದು ಕಾನೂನು ಮಾಡಿದ್ದೇವೆ. ರೆವಿನ್ಯೂ ಬಡಾವಣೆ, ಸೈಟ್ಗಳಿಗೆ ಸರ್ಕಾರ ಸೌಲಭ್ಯಗಳನ್ನು ಕೊಡಲಾಗಿದೆ. ಅವರು ಯಾರು ಸರ್ಕಾರಕ್ಕೆ ಕಂದಾಯ ಕಟ್ಟುತ್ತಿರಲಿಲ್ಲ. ಅದಕ್ಕಾಗಿ ಬಿ ಖಾತಾ ಅಭಿಯಾನ ಮಾಡಬೇಕು ಎಂದು ಹೇಳಿದ್ದೇನೆ ಎಂದು ಮಾಹಿತಿ ನೀಡಿದರು.





