ಬೆಂಗಳೂರು: ಪರಿಸರ, ಪ್ರಕೃತಿ ಮತ್ತು ಅರಣ್ಯ ಸಂರಕ್ಷಣೆಗೆ ಕರ್ನಾಟಕದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗಿರುವ ಒಲವು ಪ್ರೀತಿ ಮತ್ತು ಬದ್ಧತೆಗೆ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಅರಣ್ಯ ಸಚಿವರು ಹಾಗೂ ಅರಣ್ಯಾಧಿಕಾರಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈಶ್ವರ ಖಂಡ್ರೆ ಅವರ ಮನದ ಭಾವನೆಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ತೆಲುಗು ಮತ್ತು ಕನ್ನಡ ಭಾಷೆಯ ಲಿಪಿಯಲ್ಲಿ ಸಾಮ್ಯತೆ ಇದೆ ಎಂದ ಅವರು ರಾಷ್ಟ್ರಕವಿ ಕುವೆಂಪು ಅವರ “ಅರಣ್ಯಕ್ಕೆ ಹಾಡು ಹಾಡುವ ಮುನ್ನ ನಾನು ನನ್ನ ಮನದ ಮುಂದೆ ನಿಲ್ಲುತ್ತೇನೆ” ಎಂಬ ಸಾಲುಗಳನ್ನು ಉಲ್ಲೇಖಿಸಿ ತಮಗೆ ಈ ಸಭೆಯಿಂದ ಕನ್ನಡ ಕಲಿಯುವ ಪ್ರೇರಣೆ ಲಭಿಸಿದೆ ಎಂದರು.
ಚಿತ್ರನಟರು ಆದ ಅವರು ಕನ್ನಡದ ಮೇರು ನಟ ಡಾ. ರಾಜಕುಮಾರ್ ಅವರ ಗಂಧದಗುಡಿ ಚಿತ್ರದ ಉಲ್ಲೇಖ ಮಾಡಿ ಅರಣ್ಯ ಸಂರಕ್ಷಣೆ ಸಂದೇಶ ಸಾರಿದ ಚಿತ್ರ ಎಂದರು.
ಶ್ರೀಶೈಲ ಮತ್ತು ತಿರುಪತಿಯಲ್ಲಿ ಕರ್ನಾಟಕದ ಭಕ್ತಾದಿಗಳಿಗೆ ಅನುಕೂಲತೆ ಕಲ್ಪಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.