ಬೆಂಗಳೂರು: ಮುಡಾ ಹಗರಣ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೀಡಿದ ಪ್ರಾಸಿಕ್ಯೂಷನ್ ನಿರ್ಣಯವನ್ನು ಕ್ಯಾಬಿನೆಟ್ ಖಂಡಿಸಿದ್ದು, ಇಡೀ ಪಕ್ಷ ಮುಖ್ಯಮಂತ್ರಿಗಳ ಪರವಾಗಿ ನಿಂತು ನ್ಯಾಯಕ್ಕಾಗಿ ಹೋರಾಡಿ ಗೆಲ್ಲುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾಬಿನೆಟ್ ನೋಟ್ ನಲ್ಲಿ ನಾವು ತಿಳಿಸಿದ್ದ ಕಾನೂನಾತ್ಮಕ ಸಂಗತಿಗಳನ್ನು ರಾಜ್ಯಪಾಲರು ಪರಿಗಣಿಸದಿರುವುದು ರಾಜ್ಯಪಾಲರ ದುರುದ್ದೇಶವನ್ನು ಹಾಗೂ ರಾಜಭವನದ ದುರುದ್ದೇಶವನ್ನು ಎತ್ತಿ ತೋರಿಸುತ್ತಿದೆ. ಈ ನಿರ್ಣಯ ರಾಜಭವನವನ್ನು ದುರಪಯೋಗ ಮಾಡಿಕೊಂಡು ಹೊರಡಿಸಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ ಅವರು, ತುಂಗ ಭದ್ರಾ ಡ್ಯಾಂಗೆ 5 ಗೇಟುಗಳ ಯಶಸ್ವಿ ಅಳವಡಿಕೆಗೆ ಕೃತಜ್ಞತೆ ಸಲ್ಲಿಸಿದರು. ರಾಜ್ಯದ ಜನತೆ, ರಾಜ್ಯದ ರೈತರ ಪರವಾಗಿ ಕನ್ನಯ್ಯ ನಾಯ್ಡು ಮತ್ತು ಅಧಿಕಾರಿಗಳು, ಎಂಜಿನಿಯರ್ ಗಳು, ಸಿಬ್ಬಂದಿ, ಕಾರ್ಮಿಕರಿಗೆ ಧನ್ಯವಾದಗಳು ಎಂದು ಹೇಳಿದರು.





