ಬೆಂಗಳೂರು: ತುಮಕೂರಿನಿಂದ ರಾಮನಗರಕ್ಕೆ ಹೇಮಾವತಿ ಲಿಂಕ್ ನಾಲೆ ಯೋಜನೆಗೆ ಅಡ್ಡಿಪಡಿಸುವ ಕೆಲಸ ಆಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳ ಬಗ್ಗೆ ತುಮಕೂರು ಜಿಲ್ಲಾ ಉಸ್ತುವಾರಿ ಸಮಿತಿ ಜೊತೆ ಮಾತನಾಡಿದ್ದೇನೆ. ಗೃಹಸಚಿವರೂ ಅವರೇ ಆಗಿರುವುದರಿಂದ ಕೂಡಲೇ ಸಮಸ್ಯೆ ಬಗೆಹರಿಸಲು ಹೇಳಿದ್ದೇನೆ ಎಂದರು.
ಗೃಹಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಹೇಮಾವತಿ ಲಿಂಕ್ ನಾಲಾ ಯೋಜನೆಯಿಂದ ತುಮಕೂರಿಗೆ ತೊಂದರೆ ಆಗುವುದಿಲ್ಲ ಎಂಬ ತಾಂತ್ರಿಕ ವರದಿ ನೀಡಲಾಗಿತ್ತು. ತಾಂತ್ರಿಕ ವರದಿ ಬಂದ ಬಳಿಕವಷ್ಟೇ ಕಾಮಗಾರಿ ಪ್ರಾರಂಭ ಮಾಡಲಾಗಿದೆ. ಇದನ್ನು ಬಿಜೆಪಿ ಶಾಸಕರು ಒಪ್ಪಿಕೊಂಡಿದ್ದರು ಎಂದರು.
ಆದರೆ ಈಗ ತಾಂತ್ರಿಕ ವರದಿ ಸರಿಯಿಲ್ಲ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ತುಮಕೂರಿನಿಂದ ರಾಮನಗರ ಜಿಲ್ಲೆಗೆ ನೀರು ಕೊಂಡೊಯ್ಯುವ ಈ ಯೋಜನೆಗೆ 1 ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ಹಣವೂ ಬಿಡುಗಡೆಯಾಗಿದೆ. ಈ ಹಿಂದೆ ಬಿಜೆಪಿಯವರು ತೊಂದರೆಯಾಗುತ್ತದೆ ಎಂದು ಹೇಳಿದ್ದ ಕಾರಣಕ್ಕೆ ತಾಂತ್ರಿಕ ಸಮಿತಿ ರಚನೆ ಮಾಡಿ ಸರ್ಕಾರ ವರದಿ ಪಡೆದಿದೆ. ಆ ವರದಿ ಪ್ರಕಾರ ತುಮಕೂರಿಗೆ ತೊಂದರೆ ಇಲ್ಲ ಎಂಬ ಮಾಹಿತಿ ಇದೆ. ಇಂದಿನ ಪ್ರತಿಭಟನೆ ಕುರಿತಂತೆ ವರದಿ ಪಡೆಯುವುದಾಗಿ ಹೇಳಿದರು.





