ಹುಬ್ಬಳ್ಳಿ: ಗುರುವಾರ ( ಏಪ್ರಿಲ್ 18 ) ಬಿವಿಬಿ ಕಾಲೇಜು ಆವರಣದಲ್ಲಿ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ್ಗೆ ಚಾಕುವಿನಿಂದ ಇರಿದು ಕೊಂದ ಪ್ರಕರಣ ಸದ್ಯ ಭಾರೀ ಚರ್ಚೆಗೆ ಕಾರಣವಾಗಿದ್ದು, ಆರೋಪಿ ಫಯಾಜ್ಗೆ ಗಂಭೀರ ಶಿಕ್ಷೆ ವಿಧಿಸುವಂತೆ ಪ್ರತಿಭಟನೆಗಳು ನಡೆಯುತ್ತಿವೆ. ಒಂದೆಡೆ ಪ್ರಕರಣ ರಾಜಕೀಯ ಸ್ವರೂಪವನ್ನೂ ಸಹ ಪಡೆದುಕೊಳ್ಳುತ್ತಿದೆ.
ಆರಂಭದಲ್ಲಿ ಲವ್ ಜಿಹಾದ್, ಪ್ರೀತಿ ನಿರಾಕರಿಸಿದ್ದಕ್ಕೆ ನಡೆದ ಹತ್ಯೆ ಎಂದು ಹೇಳಲಾಗಿತ್ತಾದರೂ ಸದ್ಯ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗುತ್ತಿದೆ. ಇಬ್ಬರೂ ಜತೆಗಿರುವ ಫೋಟೊಗಳು ವೈರಲ್ ಆಗುತ್ತಿವೆ. ಇದೇ ಸಂದರ್ಭದಲ್ಲಿ ಫಯಾಜ್ ತಂದೆ ಬಾಬಾಸಾಹೇಬ್ ಸುಬಾನಿ ಮಾತನಾಡಿ ತನ್ನ ಮಗನ ಪರ ಕ್ಷಮೆ ಕೇಳಿದ್ದರು. ಇದೀಗ ಫಯಾಜ್ನ ತಾಯಿ ಮುಮ್ತಾಜ್ ಮಾತನಾಡಿದ್ದು, ಮಗ ಮಾಡಿರುವ ತಪ್ಪಿಗೆ ಕ್ಷಮೆ ಯಾಚಿಸಿದ್ದಾರೆ ಹಾಗೂ ನೇಹಾ ತನ್ನ ಮಗನಿಗೆ ಪ್ರೇಮ ನಿವೇದನೆ ಮಾಡಿದ್ದ ವಿಚಾರವನ್ನೂ ಸಹ ಹಂಚಿಕೊಂಡಿದ್ದಾರೆ.
ʼನನ್ನ ಮಗ ಮಾಡಿರುವ ತಪ್ಪಿಗೆ ರಾಜ್ಯದ ಜನರ ಕ್ಷಮೆ ಯಾಚಿಸುತ್ತೇನೆ. ನನ್ನ ಮಗ ಫಯಾಜ್ಗೆ ನೇಹಾ ಪ್ರಪೋಸ್ ಮಾಡಿದ್ದಳು. ನನ್ನ ಬಳಿ ಇದರ ಬಗ್ಗೆ ಹೇಳಿದಾಗ ಬೇಡ ಎಂದು ಹೇಳಿದ್ದೆ. ನೇಹಾ ಬೇರೆ ಅಲ್ಲ, ನನ್ನ ಮಗಳು ಬೇರೆ ಅಲ್ಲ. ನನ್ನ ಮಗನಿಗೆ ತಕ್ಕ ಶಿಕ್ಷೆ ಆಗಬೇಕುʼ ಎಂದು ಮುಮ್ತಾಜ್ ಹೇಳಿದರು.
ಅಲ್ಲದೇ ʼಫಯಾಜ್ ಚಿಕ್ಕ ವಯಸ್ಸಿನಿಂದಲೂ ಚೆನ್ನಾಗಿ ಓದುತ್ತಿದ್ದ. ಆತನನ್ನು ಕೆಎಎಸ್ ಅಧಿಕಾರಿ ಮಾಡುವ ಕನಸು ಕಂಡಿದ್ದೆ. ಈ ರೀತಿ ಆಗಿದ್ದು ಬಹಳ ಸಂಕಟ ಆಗುತ್ತೆ. ನೇಹಾ ಸಹ ತುಂಬಾ ಒಳ್ಳೆ ಹುಡುಗಿ. ಫಯಾಜ್ – ನೇಹಾ ಮದುವೆಯಾಗಬೇಕು ಎಂದುಕೊಂಡಿದ್ದರು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕುʼ ಎಂದೂ ಸಹ ಮುಮ್ತಾಜ್ ಹೇಳಿಕೊಂಡರು.





