ಬೆಂಗಳೂರು: ಮುಡಾ ಹಗರಣದ ತನಿಖೆ ಕುರಿತು ಪ್ರತಿಪಕ್ಷಗಳ ಅಹೋರಾತ್ರಿ ಪ್ರತಿಭಟನೆಗೆ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಅವರು, ನನ್ನ ಹೆಸರಿಗೆ ಮಸಿ ಬಳಿಯಲು, ನನ್ನ ವಿರುದ್ಧ ಹೊಟ್ಟೆಕಿಚ್ಚಿನಿಂದ ವಿಪಕ್ಷಗಳು ಮುಡಾ ಹಗರಣ ಎಂದು ಹೇಳಿಕೊಂಡು ರಾಜಕೀಯ ಮಾಡುತ್ತಿವೆ.
ಬಿಜೆಪಿ ಹಾಗೂ ಜೆಡಿಎಸ್ನವರು ವಿಷಯ ಇಲ್ಲದ್ದನ್ನೂ ವಿಷಯವಾಗಿ ಮಾಡಿಕೊಳ್ಳುತ್ತಿದ್ದಾರೆ. ಸುಮ್ಮನೆ ಮುಡಾ ವಿಷಯ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ನಾನು ನಿಯಮಾವಳಿ ಪ್ರಕಾರವೇ ಸೈಟ್ ಪಡೆದುಕೊಂಡಿದ್ದೇನೆ. ಕಾನೂನು ಪ್ರಕಾರವೇ ಎಲ್ಲಾ ಆಗಿದೆ. ಬಿಜೆಪಿ ಅವಧಿಯಲ್ಲೇ ನಾನು ಸೈಟ್ ಪಡೆದಿದ್ದೇನೆ. ಇದೆಲ್ಲವನ್ನು ನೋಡದೇ ಬಿಜೆಪಿಯವರು ಈಗ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಪಕ್ಷಗಳ ಪ್ರತಿಭಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಕಳೆದ 40 ವರ್ಷಗಳಿಂದ ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ. ಹೀಗಾಗಿ ನನ್ನ ಮೇಲೆ ವಿಪಕ್ಷಗಳಿಗೆ ಹೊಟ್ಟೆಕಿಚ್ಚು. ಹೀಗಾಗಿ ಸದನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಕಿಡಿಕಾರಿದರು.





