Mysore
21
overcast clouds
Light
Dark

ಮೈಸೂರು ದಸರಾ ಅದ್ದೂರಿ ಹಗರಣಕ್ಕೆ ವೇದಿಕೆಯಾಗದಿರಲಿ: ಆರ್‌.ಅಶೋಕ್‌

ಬೆಂಗಳೂರು: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವವನ್ನು ಈ ವರ್ಷ ಕಾಂಗ್ರೆಸ್‌ ಸರ್ಕಾರ ಅದ್ದೂರಿಯಾಗಿ ಆಚರಿಸಬೇಕು ಎಂಬ ನಿರ್ಧಾರ ಸಂಪೂರ್ಣ ಸ್ವಾಗತಾರ್ಹವಾಗಿದೆ. ಆದರೆ ಮೈಸೂರಿನಲ್ಲಿ ದಸರಾ ಉತ್ಸವ ಮತ್ತೊಂದು ಅದ್ದೂರಿ ಹಗರಣಕ್ಕೆ ವೇದಿಕೆಯಾಗದಿರಲಿ ಎಂಬುದೇ ಕನ್ನಡಿಗರ ಆಶಯ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಜಾರಿಗೆ ಬಂದಾಗನಿಂದ ಇಲ್ಲಿಯವರೆಗೂ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಹಾಗೂ ಮುಡಾ ಹಗರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಮೈಸೂರಿನಲ್ಲಿ ಅದ್ದೂರಿ ದಸರಾ ನಡೆಸಲು ಸರ್ಕಾರ ಮುಂದಾಗಿದ್ದು ಒಳ್ಳೆಯ ವಿಷಯವೇ ಆಗಿದೆ. ಆದರೆ ಈ ದಸರಾ ಮಹೋತ್ಸವದಲ್ಲೂ ಹಗರಣ ಎಸಗದೇ ಹಾಗೂ ಕಳೆದ ವರ್ಷದಂತೆ ಕಮಿಷನ್ ಕೇಳಿ ರಾಜ್ಯದ ಮಾನ ಹರಾಜು ಹಾಕದಿರಲಿ ಎಂದು ಅಶೋಕ್‌ ಹೇಳಿದರು.

ವಿಪಕ್ಷ ನಾಯಕ ಆರ್‌.ಅಶೋಕ್‌ ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಕಳೆದ ವರ್ಷ ದಸರಾ ಸಂದರ್ಭದಲ್ಲಿ ಸರೋದ್ ವಾದಕ ಶ್ರೀ ಪಂಡಿತ್ ತಾರಾನಾಥ್ ಬಳಿಯೂ ಪರ್ಸಂಟೇಜ್ ಕಮಿಷನ್ ಕೇಳಲಾಗಿತ್ತು. ಹೀಗಾಗಿ ಈ ಬಾರಿಯ ಅದ್ದೂರಿ ದಸರಾದಲ್ಲಿ ಯಾವುದೇ ಭ್ರಷ್ಟಾಚಾರ ಎಸಗದೇ ನಾಡಿನ ಮಾನ ಹರಾಜು ಹಾಕದಿರಲಿ ಎಂದು ಪತ್ರಿಕಾ ವರದಿಯ ತುಣುಕನ್ನು ಉಲ್ಲೇಖಿಸಿದ್ದಾರೆ.

ರಾಜ್ಯ ಸರ್ಕಾರ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಈ ವರ್ಷವಾದರೂ ಭ್ರಷ್ಟಾಚಾರದ ಸೋಂಕು ತಗುಲಿಸದೇ ಇದ್ದರ ಸಾಕು. ಸರ್ಕಾರ ಕನ್ನಡ ನಾಡಿನ ಸಂಸ್ಕೃತಿ, ಪರಂಪರೆಯ ಗೌರವ ಉಳಿಸುತ್ತೋ ಅಥವಾ ಇನ್ನೊಂದು ಭ್ರಷ್ಟಾಚಾರದ ಅಂಬಾರಿ ಹೊತ್ತು ಕರ್ನಾಟಕದ ಕಳಿಯುತ್ತೋ ಕಾದು ನೋಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.