ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣದಲ್ಲಿ ಮುಡಾ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ದೂರುದಾರ ಸ್ನೇಹಮಯಿ ಕೃಷ್ಣ ಅವರು ಜಾರಿ ನಿರ್ದೇಶನಾಲಯಕ್ಕೆ ಸಂಪೂರ್ಣ ದಾಖಲೆ ಸಲ್ಲಿಸಿದ್ದಾರೆ.
ಸಲ್ಲಿಸಿರುವ ದಾಖಲೆಗಳ ಸಂಬಂಧ ಸ್ನೇಹಮಯಿ ಕೃಷ್ಣ ಅವರಿಂದ ಇ.ಡಿ ಸಂಪೂರ್ಣ ದಾಖಲೆ ಪಡೆದುಕೊಂಡಿದ್ದು, ಮುಂದಿನ ವಿಚಾರಣೆ ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ.
ಮುಡಾ ಪ್ರಕರಣ ಸಂಬಂಧ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ಸ್ನೇಹಮಯಿ ಕೃಷ್ಣ ಅವರಿಗೆ ಇ.ಡಿ ಸಮನ್ಸ್ ನೀಡಿತ್ತು. ಅದರಂತೆ ಕೃಷ್ಣ ಅವರು ನಿನ್ನೆ ಬೆಳಿಗ್ಗೆ ಇ-ಮೇಲ್ ಮೂಲಕ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದರು.
ಇದರೊಂದಿಗೆ ಬೆಂಗಳೂರಿನ ಇ.ಡಿ ಕಚೇರಿಗೆ ಭೇಟಿ ನೀಡಿ ದಾಖಲೆಗಳ ಪ್ರತಿಗಳನ್ನು ಸಹ ನೀಡಿದ್ದಾರೆ.
ಸಂಪೂರ್ಣ ದಾಖಲೆಗಳನ್ನು ಪರಿಶೀಲನೆ ನಡೆಸಿದ ಇ.ಡಿ, ಸ್ನೇಹಮಯಿ ಕೃಷ್ಣರಿಂದ ಸಂಪೂರ್ಣ ವಿವರಣೆ ಪಡೆದುಕೊಂಡಿದೆ.
ಇನ್ನು ಮುಂದೆ ಅಸಲಿ ಆಟ ಶುರುವಾಗಲಿದೆ ಎನ್ನಲಾಗಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಕೆಲವೇ ದಿನಗಳಲ್ಲಿ ನೋಟಿಸ್ ನೀಡುವ ಸಾಧ್ಯತೆ ಯಿದೆ ಎಂಬ ಮಾಹಿತಿ ಲಭ್ಯವಾಗಿದೆ.