ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಕಷ್ಟವಾಗಿರುವ 14 ನಿವೇಶನಗಳನ್ನು ವಾಪಾಸ್ ನೀಡಿದ್ದು ಸ್ವಲ್ವ ತಡವಾಗಿರಬಹುದು, ಆದರೆ ಈ ನಿರ್ಧಾರ ಸರಿ ಇರುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಇಂದು(ಅಕ್ಟೋಬರ್.1) ಸುದ್ದಿಗಾರರೊಂದಿಗೆ ಮಾತನಾಡಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಮುಡಾದ 14 ನಿವೇಶನಗಳನ್ನು ವಾಪಾಸ್ ಮಾಡಲು ಪತ್ರ ಬರೆದಿದ್ದಾರೆ. ಈ ವಿಚಾರವಾಗಿ ಕಾನೂನಾತ್ಮಕವಾಗಿ ಮುಂದೇನು ಆಗುತ್ತೆ ಎಂದು ಕಾದು ನೋಡಬೇಕಾಗಿದೆ. ಈ ಮಧ್ಯೆ ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಹಾಗೇ ಹುಡುಕುತ್ತಿದ್ದಾರೆ. ಸಿಎಂ ಪತ್ನಿ ನಿವೇಶನಗಳನ್ನು ವಾಪಾಸ್ ನೀಡಿದ್ದು ಸ್ವಲ್ವ ತಡವಾಗಿರಬಹುದು. ಆದರೆ ಒಮೊಮ್ಮೆ ತಡವಾಗಿರುವ ನಿರ್ಧಾರಗಳು ಸರಿಯಾಗಿರುತ್ತವೆ ಎಂದು ಹೇಳಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ನಮ್ಮ ಪಕ್ಷದ 136 ಜನ ಶಾಸಕರೂ ನಿಲ್ಲುತ್ತೇವೆ. ಅಲ್ಲದೇ ಕಾಂಗ್ರೆಸ್ ಹೈಕಮಾಂಡ್ ಸಹ ಅವರ ಪರ ನಿಲ್ಲುತ್ತದೆ. ಇದನ್ನು ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.