Mysore
21
overcast clouds
Light
Dark

ಮುಡಾ ಪ್ರಕರಣ: ನಾನು ದಾಖಲೆ ತಂದಿದ್ದು ಸಾಬೀತಾದರೆ ರಾಜೀನಾಮೆ ಕೊಡ್ತೀನಿ: ಸಚಿವ ಬೈರತಿ ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ವಿಮಾನ ಅಥವಾ ಹೆಲಿಕಾಪ್ಟರ್‌ನಲ್ಲಿ ನಾನೇನಾದರೂ ದಾಖಲೆ ಹೊತ್ತು ತಂದಿದ್ದರೆ ರಾಜೀನಾಮೆ ಕೊಡ್ತೇನೆ. ಇಲ್ಲ ಅಂದರೆ ಅವರು ಏನು ಮಾಡುತ್ತಾರೆ ಕೇಳಿ ಎಂದು ಸಚಿವ ಭೈರತಿ ಸುರೇಶ್‌ ಸವಾಲು ಹಾಕಿದ್ದಾರೆ.

ವಿಶೇಷ ವಿಮಾನ ಅಥವಾ ಹೆಲಿಕಾಪ್ಟರ್‌ನಲ್ಲಿ ದಾಖಲೆ ತಂದಿದ್ದಾರೆ ಎಂಬ ವಿಪಕ್ಷ ನಾಯಕರ ಆರೋಪಕ್ಕೆ ಸಚಿವ ಭೈರತಿ ಸುರೇಶ್‌ ಕಿಡಿ ಕಾರಿದ್ದು, ಯಾರಾದಾರೂ ದಾಖಲೆ ತರಲು ಆಗುತ್ತಾ ಎಂದು ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾದಲ್ಲಿ 20 ವರ್ಷಗಳಿಂದ ತಪ್ಪುಗಳಾಗುತ್ತಾ ಬಂದಿದೆ. 2005 ರವರೆಗಿನ ಎಲ್ಲ ವಿಚಾರ ತನಿಖೆಗೆ ಕೊಡಲು ಸಿದ್ಧತೆ ನಡೆಸುತ್ತಿದ್ದೇನೆ. ಸುಖಾ ಸುಮ್ಮನೇ ಸಿಎಂ ರಾಜೀನಾಮೆ ಕೊಡಲು ಆಗುತ್ತಾ? ಜೆಡಿಎಸ್‌ ಶಾಸಕ ಜಿ.ಟಿ ದೇವೇಗೌಡ ಏನು ತನಿಖಾಧಿಕಾರಿನಾ ಎಂದು ಪ್ರಶ್ನಿಸಿದರು.

ಮುಡಾ ಪ್ರಕರಣವನ್ನು ಐಎಎಸ್‌ ಅಧಿಕಾರಿಗಳಿಗೆ ಕೊಡದೆ ಬಿಜೆಪಿಗರಿಗೆ ಕೊಡಬೇಕಾ? ಇಬ್ಬರು ಹಿರಿಯ ಐಎಎಸ್‌ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸರ್ಕಾರ ಯಾರನ್ನು ಬಿಡಲ್ಲ. ಸ್ವಲ್ಪ ದಿನ ಕಾಯಿರಿ ಎಲ್ಲಾ ಗೊತ್ತಾಗುತ್ತೆ ಎಂದು ಹೇಳಿದರು.