ಬೆಂಗಳೂರು : ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಕಾರ್ಯವ್ಯಾಪ್ತಿಯನ್ನು ನಿರ್ಬಂಧಿಸುವ ಕುರಿತು ವಾರ್ತಾ ಇಲಾಖೆಗೆ ಸರ್ಕಾರ ಪತ್ರ ಬರೆದಿದೆ. ಪತ್ರದಲ್ಲಿ, ಮಾಧ್ಯಮಗಳು ರಾಜಕೀಯ ನಾಯಕರ ಪ್ರತಿಕ್ರಿಯೆಗಳನ್ನು ಪೋರ್ಟಿಕೋ ಅಥವಾ ಕೆಂಗಲ್ ಗೇಟ್ ಬಳಿಯ ನಿಗದಿತ ಸ್ಥಳದಲ್ಲಿ ಮಾತ್ರ ತೆಗೆದುಕೊಳ್ಳಬೇಕು ಎಂದು ತಿಳಿಸಿದೆ.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು ಅಥವಾ ಶಾಸಕರನ್ನು ವಿಧಾನಸೌಧದ ಇತರ ಯಾವುದೇ ಸ್ಥಳದಲ್ಲಿ ಹಿಂಬಾಲಿಸಿ ಪ್ರತಿಕ್ರಿಯೆ ತೆಗೆದುಕೊಳ್ಳಬಾರದು ಎಂದು ನಿಯಮ ತಂದಿದೆ.
ಪತ್ರದಲ್ಲಿ ಏನಿದೆ?
ವಾರ್ತಾ ಮತ್ತು ಪ್ರಚಾರ ಇಲಾಖೆಯು ಶಿಫಾರಸು ಮಾಡುವ ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಕಾರ್ಯಕಾರಿ)ಯಲ್ಲಿ ಗುರುತಿನ ಚೀಟಿ ವಿತರಿಸಲಾಗುತ್ತಿದೆ. ಈ ರೀತಿ ಗುರುತಿನ ಚೀಟಿ ಹೊಂದಿರುವ ಎಲ್ಲ ಪತ್ರಿಕಾ ಮಾಧ್ಯಮ ಪ್ರತಿನಿಧಿಗಳಿಗೆ ಭದ್ರತಾ ಹಿತದೃಷ್ಟಿಯಿಂದ ವಿಧಾನಸೌಧದ ಪಶ್ಚಿಮ ದ್ವಾರದ ಫೋರ್ಟಿಕೋ ಬಳಿ ನಿಗದಿಪಡಿಸಕಾಗಿರುವ ಸ್ಥಳದಲ್ಲಿ ಮಾತ್ರ ಹೇಳಿಕೆಗಳನ್ನು ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.
ವಿಧಾನಸೌಧ ಒಳ ಪ್ರವೇಶಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ, ಸಚಿವರು ಅಥವಾ ಗಣ್ಯ ವ್ಯಕ್ತಿಗಳಿಂದ ಬೈಟ್ ಪಡೆಯಲು ಅವರನ್ನು ಹಿಂಬಾಲಿಸದಂತೆ ಸೂಕ್ತ ಸಲಹೆ/ಸೂಚನೆಗಳನ್ನು ನೀಡುವಂತೆಯೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಹಿಂದೆಯೂ ಹೊರಡಿಸಿದ್ದ ಅಧಿಸೂಚನೆ
ಸಿದ್ದರಾಮಯ್ಯ ಅವರು ಈ ಹಿಂದೆ 2023-2018ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆಯೂ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಅಧಿಸೂಚನೆಯನ್ನು ಹೊರಡಿಸಿದ್ದರು. ವಿಧಾನಸೌಧದ ಬದಲು ವಾರ್ತಾ ಇಲಾಖೆಯಲ್ಲಿ ಸಚಿವರ ಮತ್ತು ಸಂಬಂಧಪಟ್ಟವರು ಪತ್ರಿಕಾಗೋಷ್ಠಿ ನಡೆಸುವಂತೆ ಸೂಚನೆ ಕೊಟ್ಟಿದ್ದರು. ಇದು ತೀವ್ರ ವಿವಾದ ಸೃಷ್ಟಿಸಿದ್ದರಿಂದ ಕೊನೆಗೆ ಅಧಿಸೂಚನೆಯನ್ನು ಹಿಂಪಡೆಯಲಾಗಿತ್ತು.





