ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತ ವೈಖರಿ ನೋಡಿ ಜನ ಛೀ… ಥೂ.. ಎನ್ನುತ್ತಿದ್ದಾರೆ. ಇಂಥ ಆಡಳಿತ ಕೊಡಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇ.ಡಿ.ಯಿಂದ ಬಂಧಿತನಾಗಿ ಅಮಾನತುಗೊಂಡು ಜೈಲಿನಲ್ಲಿರುವ ಆರೋಪಿಗೆ ಮುಂಬಡ್ತಿ ನೀಡಲು ಲಂಚ ಕೊಟ್ಟಿದ್ದಾರೆ ಎಂದರೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಏನಿದೆ ಎಂದು ಪ್ರಶ್ನಿಸಿದರು.
ನಟೇಶ್ಗೆ ಪ್ರಮೋಷನ್ ಕೊಡಲು ಲಂಚ ಕೊಟ್ಟಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ಆತ ಅತ್ಯಂತ ಭ್ರಷ್ಟ ಅಧಿಕಾರಿ. ಅಂಥವನನ್ನು ರಕ್ಷಣೆ ಮಾಡುವ ಕೆಲಸ ಇದೇ ಸಿದ್ದರಾಮಯ್ಯನವರಿಂದ ನಡೆಯಿತು. ಇದು ಅವರ ಆಡಳಿತ ವೈಖರಿ ಎಂದು ವ್ಯಂಗ್ಯವಾಡಿದರು.
ಇಂಥ ಭ್ರಷ್ಟನನ್ನು ಕಾಂಗ್ರೆಸ್ ಸರ್ಕಾರ ಬಂಧಿಸಲಿಲ್ಲ. ಆತನ ಬಂಧನವಾದರೆ ನನ್ನ ಬುಡಕ್ಕೆ ಬರಬಹುದೆಂದು ಸಿದ್ದರಾಮಯ್ಯ ಎಲ್ಲಾ ಹಂತದಲ್ಲೂ ರಕ್ಷಣೆ ಮಾಡಿದರು. ಮೈಸೂರನ್ನು ಸಂಪೂರ್ಣವಾಗಿ ಹಾಳು ಮಾಡಿದ್ದೀಯಾ, ತನಿಖೆ ನಡೆಯುತ್ತಿದ್ದರೂ ಒಬ್ಬ ಅಧಿಕಾರಿಗೆ ಮುಂಬಡ್ತಿ ನೀಡಿರುವ ನಿದರ್ಶನ ದೇಶದಲ್ಲಿ ಎಲ್ಲಿಯಾದರೂ ಇದೆಯೇ ಎಂದು ಪ್ರಶ್ನಿಸಿದರು.





