ಬೆಂಗಳೂರು: ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಸಚಿವರ ಹೆಸರನ್ನು ಅಧಿವೇಶನದಲ್ಲಿ ಬಹಿರಂಗ ಪಡಿಸುವೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಹೇಳಿಕೆಗೆ ಕಾಂಗ್ರೆಸ್ ಸಚಿವರು ಸವಾಲ್ ಹಾಕಿದ್ದಾರೆ.
ವಿಧಾನಸೌಧದಲ್ಲಿ ಇಂದು(ಮಾರ್ಚ್.17) ಈ ವಿಚಾರ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಸಚಿವ ಸಂತೋಷ್ ಲಾಡ್ ಅವರು, ಶಾಸಕ ಯತ್ನಾಳ್ ಅವರು ಆ ಸಚಿವರ ಹೆಸರನ್ನು ಬಹಿರಂಗ ಪಡಿಸಲಿ ಒಳ್ಳೆಯದು. ಸಚಿವರು ಯಾರೆಂದು ಹೇಳಿದರೆ ತನಿಖೆಗೂ ಅನುಕೂಲವಾಗಲಿದೆ, ಈಗಲೇ ಯಾಕೆ ಹೇಳಬಾರದು? ಅಲ್ಲದೇ ಅವರು ಹೇಳಿರುವುದು ಸುಳ್ಳಾ ಅಥವಾ ಸತ್ಯನಾ ಎಂಬುದು ರಾಜ್ಯದ ಜನತೆಗೂ ತಿಳಿಯಲಿದೆ. ಅವರು ನೀಡಿರುವ ಹೇಳಿಕೆಯಲ್ಲಿ ಸತ್ಯವಿದ್ದರೆ ಈಗಲೇ ಹೊರಬರಲಿ ಎಂದು ತಿರುಗೇಟು ನೀಡಿದ್ದಾರೆ.
ಸಚಿವ ಎಂ.ಬಿ.ಪಾಟೀಲ್
ಈ ಕುರಿತು ಸಚಿವ ಎಂ.ಬಿ.ಪಾಟೀಲ್ ಅವರು ಮಾತನಾಡಿ, ಶಾಸಕ ಯತ್ನಾಳ್ ಹೊರಗಡೆ ಹೇಳಿಕೆ ನೀಡುವುದು ಬೇಡ, ಅವರಿಗೆ ತಾಕತ್ತಿದ್ದರೆ ಆ ಸಚಿವರ ಹೆಸರು ಹೇಳಲಿ. ಬೇಕಾದರೆ ಅಧಿವೇಶನದಲ್ಲೇ ಬಹಿರಂಗಪಡಿಸಲಿ ಯಾರು ಬೇಡವೆಂದು ಹೇಳಿದ್ದು. ಆ ಪ್ರಕರಣದಲ್ಲಿ ಯಾರು ಯಾರು ಕೇಂದ್ರ ಸಚಿವರು, ಇದ್ದಾರೆ, ಅವರ ಪಕ್ಷದವರು ಯಾರಿದ್ದಾರೆ ಹಾಗೂ ನಮ್ಮ ಪಕ್ಷದವರು ಇದ್ದಾರೆ ಎಂದು ಹೇಳಲಿ. ಅದನ್ನು ಬಿಟ್ಟು ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುವುದು ಬೇಡ ಟಾಂಗ್ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಸಚಿವ ರಾಮಲಿಂಗ ರೆಡ್ಡಿ ಅವರು ಪ್ರತಿಕ್ರಿಯಿಸಿ, ಯತ್ನಾಳ್ ಅವರ ಬಳಿ ಮಾಹಿತಿ ಇದ್ದರೆ ಅದನ್ನು ಬಹಿರಂಗ ಪಡಿಸಲಿ. ಈ ವಿಚಾರದಲ್ಲಿ ಅವರಿಗೆ ಯಾರದ್ದೂ ಅಡ್ಡಿ ಇಲ್ಲ. ಅವರು ಎಷ್ಟು ಬೇಗ ಆ ಸಚಿವರ ಹೆಸರು ಹೇಳುತ್ತಾರೋ ಅಷ್ಟೂ ಬೇಗ ತನಿಖೆ ಸುಲಭವಾಗಲಿದೆ ಎಂದು ಹೇಳಿದ್ದಾರೆ.



