ಅರೇಹಳ್ಳಿ: ಕಾಫಿ ತೋಟವೊಂದರಲ್ಲಿ ಮೆಣಸು ಕುಯ್ಯುವ ವೇಳೆ ಹೃದಯಘಾತವಾಗಿ ಅಸ್ಸಾಂ ಮೂಲದ ವಲಸೆ ಕಾರ್ಮಿಕನೊರ್ವ ಮೃತಪಟ್ಟಿರುವ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಸ್ಸಾಂ ಮೂಲದ ಫಾರೂಖ್ (18) ಎಂಬಾತ ಮೃತಪಟ್ಟಿರುವ ವ್ಯಕ್ತಿ.
ತಾಲೂಕಿನ ಬಿಕ್ಕೋಡು ಬಳಿಯ ಇರಕರವಲ್ಲಿ ಗ್ರಾಮದ ಮಕ್ಬೂಲ್ ಎಂಬುವವರಿಗೆ ಸೇರಿದ ಕಾಫಿ ತೋಟದಲ್ಲಿ ಇಂದು ಸಂಜೆಯ ವೇಳೆಯಲ್ಲಿ ಮೆಣಸು ಕೊಯ್ಲು ಕೆಲಸ ಮುಗಿಯುತ್ತಿದ್ದಂತೆ ಎಲ್ಲಾ ಕಾರ್ಮಿಕರು ಕಣದತ್ತ ವಾಪಸ್ಸಾದರು.
ಫಾರೂಖ್ ಎಂಬಾತ ಬಾರದನ್ನೂ ಗಮನಿಸಿದ ಇನ್ನುಳಿದ ಕಾರ್ಮಿಕರು ಹುಡುಕಾಟ ನಡೆಸಿದ್ದಾರೆ. ನಂತರ, ಮರದ ಬಳಿ ಅಂಗಾತ ಬಿದ್ದಿರುವುದು ಕಂಡು ತಕ್ಷಣ ಹತ್ತಿರದ ಅರೇಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ, ಆ ವೇಳೆಗಾಗಲೆ ಮೃತಪಟ್ಟಿರುವುದನ್ನು ವೈದ್ಯಾಧಿಕಾರಿ ದೃಢಪಡಿಸಿದ್ದಾರೆ.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸಾವಿನ ನಿಜಾಂಶ ಹೊರಬೀಳಬೇಕಿದೆ.




