Mysore
19
clear sky

Social Media

ಶುಕ್ರವಾರ, 30 ಜನವರಿ 2026
Light
Dark

ಸಮುದಾಯದಿಂದ ಮತ್ತೊಬ್ಬರನ್ನು ಸಚಿವರನ್ನಾಗಿ ಮಾಡಿ: ಈಡಿಗ ಸಮಾವೇಶದಲ್ಲಿ ಒಕ್ಕೊರಲ ಮನವಿ

ಬೆಂಗಳೂರು: ಈಡಿಗ ಸಮುದಾಯದ ಸ್ವಾಭಿಮಾನಿ ಸಮಾವೇಶದಲ್ಲಿ ಈಡಿಗ ಸಮುದಾಯದವರಿಗೆ ಎರಡು ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

ನಗರದಲ್ಲಿ ಇಂದು ನಡೆದ ಈಡಿಗ ಹಾಗೂ ಅದರ ಉಪಪಂಗಡಗಳ ಸ್ವಾಭಿಮಾನಿಸಮಾವೇಶದಲ್ಲಿ ತಮ್ಮ ಸಮುದಾಯದವರಿಗೆ ಎರಡು ಸಚಿವ ಸ್ಥಾನಗಳನ್ನು ನೀಡಬೇಕು ಎಂದು ಸಮುದಾಯದ ನಾಯಕರು ಒತ್ತಾಯ ಮಾಡಿರುವುದಾಗಿ ತಿಳಿದು ಬಂದಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಮುದಾಯದ ಶಾಸಕ ಬೇಲೂರು ಗೋಪಾಲಕೃಷ್ಣ, ಆರ್ಯ-ಈಡಿಗ ಅಭಿವೃದ್ಧಿ ನಿಗಮಕ್ಕೆ 500ಕೋಟಿ ರೂ.ಗಳ ಅನುದಾನ ನೀಡಲೇ ಬೇಕು. ಜೊತೆಗೆ ಸಮುದಾಯಕ್ಕೆ 2ಸಚಿವ ಸ್ಥಾನಗಳನ್ನೂ ನೀಡಬೇಕು ಎಂದು ಒತ್ತಾಯ ಮಾಡಿದರು.

ಬಳಿಕ ಮಾತನಾಡಿದ ಶಾಸಕ ಹರತಾಳ್‌ ಹಾಲಪ್ಪ, ಈಗಾಗಲೇ ನಮ್ಮ ಸಮುದಾಯದಿಂದ ಮಧು ಬಂಗಾರಪ್ಪ ಸಚಿವರಾಗಿದ್ದಾರೆ. ಆದರೆ ನಮ್ಮ ಸಮುದಾಯದಿಂದ ಮತ್ತೊಬ್ಬ ಸಚಿವರನ್ನು ಮಾಡಬೇಕು. ರಾಜ್ಯದಲ್ಲಿ ಈಡಿಗರ ಸಂಖ್ಯೆ 50ಲಕ್ಷಕ್ಕಿಂತಲೂ ಹೆಚ್ಚಿದೆ ಎಂದು ಕಾಂತರಾಜ್‌ ಆಯೋಗದ ವರದಿ ತಿಳಿಸಿದೆ. ಹೀಗಾಗಿ ನಮ್ಮ ಸಮುದಾಯದಿಂದ ಮತ್ತೊಬ್ಬರನ್ನು ಸಚಿವರನ್ನಾಗಿಸಬೇಕು ಎಂದು ತಿಳಿಸಿದರು.

ಶಿಕ್ಷಣ ಸಚಿವ ಮಧುಬಂಗಾರಪ್ಪ ಮಾತನಾಡಿ, ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಸಣ್ಣಪ್ರಮಾಣದ ಹಿಂಡುವಳಿ ಮಾಡುತ್ತಿರುವ ರೈತರಿಗೆ ಜಮೀನುಗಳನ್ನು ಸಕ್ರಮ ಮಾಡಿಕೊಡಬೇಕು. ನಾರಾಯಣ ಗುರುಗಳ ಅಧ್ಯಯನ ಪೀಠಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕು ಮತ್ತು ಶಾಲಾ ಪಠ್ಯದಲ್ಲಿ ನಾರಾಯಣ ಗುರುಗಳ ವಿಷಯವನ್ನು ಸೇರಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಚಿತ್ರನಟರಾದ ಡಾ.ಶಿವರಾಜ್‌ಕುಮಾರ್‌, ಶ್ರೀಮುರಳಿ, ಸೇರಿದಂತೆ ಅನೇಕ ಗಣ್ಯರು ಹಾಗೂ ಸಮುದಾಯದ ನಾಯಕರು ಭಾಗವಹಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!