ಬೆಂಗಳೂರು : ಬಾಬ್ರಿ ಮಸೀದಿ ನಿರ್ನಾಮ ಆದಂತೆ ಭಟ್ಕಳದಲ್ಲಿ ಚಿನ್ನದ ಪಳ್ಳಿಯೂ ಆಗಲಿದೆ ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆಯ ವಿವಾದಾತ್ಮಕ ಹೇಳಿಕೆಗೆ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಸಂಸದ ಅನಂತಕುಮಾರ್ ಹೆಗ್ಡೆ ಕೇಂದ್ರ ಸಚಿವರಾಗಿದ್ದ ಅವರು ಜವಾಬ್ದಾರಿಯಿಂದ ಮಾತನಾಡಬೇಕು. ಅವರ ಈ ಹೇಳಿಕೆಯನ್ನು ಯಾರು ಒಪ್ಪುವುದಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸುವಂತೆ ನಾನೇನು ಪೊಲೀಸರಿಗೆ ಸೂಚನೆ ನೀಡಿಲ್ಲ. ಅವರಿಗೆ ಅವರ ಕೆಲಸ ಏನೆಂಬುದು ಗೊತ್ತಿದೆ, ಅದನ್ನು ಪೊಲೀಸರು ಮಾಡುತ್ತಾರೆ. ಅನಂತ್ ಕುಮಾರ್ ವಿರುದ್ಧ ಕಾನೂನು ಕ್ರಮ ಪೊಲೀಸರು ಕೈಗೊಳ್ಳುತ್ತಾರೆ ಎಂದು ಗೃಹ ಸಚಿವರು ಹೇಳಿದರು.
ಶಾಂತಿ ಕದಡುವ ರೀತಿಯಲ್ಲಿ ಮಾತನಾಡುವುದು ಸರಿಯೇ? ಈ ರೀತಿಯ ಪ್ರಚೋದನಾಕಾರಿ ಹೇಳಿಕೆಯಿಂದ ಅನಾಹುತ ನಡೆದರೆ ಯಾರು ಹೊಣೆ. ಇವರಿಗೆ ಯಾರು ಪ್ರೇರೇಪಿಸಿದ್ದಾರೋ ಗೊತ್ತಿಲ್ಲ. ಏನಾದರೂ ಅಹಿತಕರ ಘಟನೆ ನಡೆದರೇ ಅನಂತ್ಕುಮಾರ್ ಅವರೇ ಜವಾಬ್ದಾರರಾಗಿರುತ್ತಾರೆ ಎಂದು ತಿಳಿಸಿದರು.
ಕಳೆದ ಮೂರು ವರ್ಷಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ಈ ರೀತಿಯ ಹೇಳಿಕೆಯನ್ನು ನೀಡುತ್ತಿದ್ದಾರೆ. ಅವಹೇಳಕಾರಿ ಹೇಳಿಕೆ, ಪ್ರಚೋದಕಾರಿಯಾಗಿ ಮಾತನಾಡುವುದು, ಬೇರೆಯವರನ್ನು ನಿಂದಿಸಿ ಮಾತನಾಡುವುದನ್ನು ನಾವು ಸಹ ಗಮನಿಸುತ್ತಿದ್ದೇವೆ ಎಂದರು.
ಇನ್ನು ಸಿಎಂ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ನಿಂದಿಸಿದ ಬಗ್ಗೆ ಮಾತನಾಡಿ, ಅದು ಅವರವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದರು.





