Mysore
20
few clouds

Social Media

ಶನಿವಾರ, 07 ಫೆಬ್ರವರಿ 2026
Light
Dark

ವೈಜ್ಞಾನಿಕ ಹಾದಿಯ ಮೂಲಕ ಒಂದು ಪೀಳಿಗೆಯನ್ನೇ ಪ್ರಭಾವಿಸಿದ ಮಹಾನ್ ವ್ಯಕ್ತಿ ಕುವೆಂಪು : ಹೆಚ್‌.ಸಿ.ಮಹದೇವಪ್ಪ

ಮೈಸೂರು: ಆಧುನಿಕ ಕನ್ನಡ ಸಾಹಿತ್ಯದ ಪಿತಾಮಹರಾದ ಕುವೆಂಪು ಅವರು ತಮ್ಮ ವೈಚಾರಿಕತೆ ಹಾಗೂ ವೈಜ್ಞಾನಿಕ ಹಾದಿಯ ಮೂಲಕ ಒಂದು ಪೀಳಿಗೆಯನ್ನೇ ಪ್ರಭಾವಿಸಿದ ಮಹಾನ್ ವ್ಯಕ್ತಿ ಎಂದು ಉಸ್ತುವಾರಿ ಸಚಿವ ಡಾ.ಹೆಚ್‌.ಸಿ.ಮಹದೇವಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಅವರು, ಮನುಜ ಮತ ವಿಶ್ವಪಥ ಎಂಬ ಮಹತ್ವದ ತಿಳುವಳಿಕೆಯನ್ನು ನಮ್ಮೆಲ್ಲರಿಗೂ ನೀಡಿದ ರಾಷ್ಟ್ರಕವಿ ಕುವೆಂಪು ಅವರು ಕೆಳವರ್ಗಗಳು ಸಾಕ್ಷರತೆ ಹೊಂದಿ, ಪ್ರಜ್ಞಾವಂತರಾಗಿ ಮೌಡ್ಯತೆ ಹಾಗೂ ಕಂದಾಚಾರಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸಬೇಕೆಂದು ಬಯಸಿದ್ದರು.

ಮಹಿಳಾ ಹಕ್ಕುಗಳ ಪ್ರಬಲ ಪ್ರತಿಪಾದಕರಾಗಿದ್ದ ಕುವೆಂಪು ಅವರು ತಮ್ಮೆಲ್ಲಾ ಕೃತಿಗಳಲ್ಲಿ ಸಮಾನ ಹಕ್ಕುಗಳ ಜೊತೆಗೆ ನಿಸರ್ಗದ ಮಹತ್ವವನ್ನೂ ಕೂಡಾ ಪ್ರತಿಪಾದಿಸಿದ್ದಾರೆ. ಇನ್ನು ಯುವ ಸಮುದಾಯದಲ್ಲಿ ಅತ್ಯಂತ ನಂಬಿಕೆ ಇಟ್ಟುಕೊಂಡಿದ್ದ ಕುವೆಂಪು ಅವರು ಸಾಹಿತ್ಯದ ಮೂಲಕ ಮೊದಲ ಬಾರಿಗೆ ಅವರಿಗೆ ವಿಚಾರ ಕ್ರಾಂತಿಗೆ ಆಹ್ವಾನ ನೀಡಿದ ಓರ್ವ ದಾರ್ಶನಿಕ ವ್ಯಕ್ತಿ.

ಇನ್ನು ತಮ್ಮ ಮಹಾಛಂದಸ್ಸಿನ ಮೂಲಕ ‘ರಾಮಾಯಣ ದರ್ಶನಂ’ ಕೃತಿಯನ್ನು ಬರೆದು, ಶೂದ್ರ ವರ್ಗಗಳೂ ಕೂಡಾ ಯಾವುದಕ್ಕೂ ಕಡಿಮೆ ಇಲ್ಲ ಎನ್ನುವುದನ್ನು ಸಾಧಿಸಿ ತೋರಿಸಿ, ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಕುವೆಂಪು ಅವರು ಕನ್ನಡ ಸಾಹಿತ್ಯಕ್ಕೆ ವೈಚಾರಿಕ ಸ್ಪರ್ಶವನ್ನು ನೀಡಿದಂತವರು.

ಇನ್ನು ನಮ್ಮ ಮೈಸೂರಿನ ನೆಲದಲ್ಲಿ ಇದ್ದು ಸಾಕಷ್ಟು ಬರಹ ಕೃಷಿ ಮಾಡಿದ ಈ ಉದಯರವಿ, ಬಹುದೊಡ್ಡ ವಿದ್ಯಾರ್ಥಿ ಪರಂಪರೆಯನ್ನು ಬೆಳೆಸಿ ಹೋಗಿದ್ದಾರೆ ಎಂಬುದುನ್ನು ಮನದುಂಬಿ ನೆನೆಯುತ್ತೇನೆ.

ಜಗದ ಕವಿ ಯುಗದ ಕವಿ ಎಂದೇ ಹೆಸರಾದ ಕುವೆಂಪು ಅವರ ಜನ್ಮದಿನದ ಪ್ರಯುಕ್ತ ಮೊದಲಿಗೆ ತಮ್ಮೆಲ್ಲರಿಗೂ ವಿಶ್ವ ಮಾನವ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತಾ, ಕುವೆಂಪು ಅವರು ಹೇಳಿಕ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ನಮ್ಮ ವ್ಯಕ್ತಿತ್ವದಲ್ಲಿ ರೂಪಿಸಿಕೊಂಡು ಸಮಾಜವನ್ನು ಮೌಡ್ಯ ರಹಿತವಾಗಿ ಮತ್ತು ಸಮಾನತೆಯ ನೆಲೆಯಲ್ಲಿ ಆರೋಗ್ಯಕರವಾಗಿ ಕಟ್ಟೋಣ ಎಂದು ಈ ಮೂಲಕ ತಮ್ಮೆಲ್ಲರಿಗೂ ತಿಳಿಸಲು ಬಯಸುತ್ತೇನೆ ಎಂದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!