ಬೆಂಗಳೂರು : ಕರ್ನಾಟಕ ರಸ್ತೆ ಸಾರಿಗೆ ನಿಗಮವು ವಾರಾಂತ್ಯದ ದಿನಗಳಲ್ಲಿ ಬೆಂಗಳೂರಿನಿಂದ ವಿವಿಧ ಪ್ರವಾಸಿ, ಯಾತ್ರಾ ಸ್ಥಳಗಳಿಗೆ ಪ್ಯಾಕೇಜ್ ಟೂರ್ ಸೇವೆಗಳನ್ನು ಆರಂಭಿಸಿದೆ.
ಕೆಎಸ್ಆರ್ಟಿಸಿಯ ಬೆಂಗಳೂರು ಕೇಂದ್ರ ವಿಭಾಗದ ವತಿಯಿಂದ ಶನಿವಾರ ಮತ್ತು ಭಾನುವಾರ ರಾಜಹಂಸ ಮತ್ತು ಅಶ್ವಮೇಧ ಕ್ಲಾಸಿಕ್ ಸಾರಿಗೆಗಳೊಂದಿಗೆ ಪ್ಯಾಕೇಜ್ಟೂರ್ ಗಳನ್ನು ಪ್ರಾರಂಭಿಸಲಾಗಿದೆ.
ಪ್ಯಾಕೇಜ್ ಟೂರಿನಲ್ಲಿ ಪ್ರವೇಶ ಶುಲ್ಕ, ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ಹೊರತುಪಡಿಸಿ ಪ್ರಯಾಣ ದರವನ್ನು ನಿಗದಿಪಡಿಸಲಾಗಿದೆ.
ಬೆಂಗಳೂರಿನಿಂದ ಗಗನಚುಕ್ಕಿ ಪ್ಯಾಕೇಜ್ ಟೂರ್ನಲ್ಲಿ ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿ ಸ್ಥಳಗಳಿಗೆ ರಾಜಹಂಸ ಬಸ್ ವ್ಯವಸ್ಥೆ ಕಲ್ಪಿಸಲಿದ್ದು, ವಯಸ್ಕರಿಗೆ 750, ಮಕ್ಕಳಿಗೆ 600 ಪ್ರಯಾಣ ದರ ನಿಗದಿಪಡಿಸಲಾಗಿದೆ.
ಇದೇ ಮಾರ್ಗದಲ್ಲಿ ಸಂಚರಿಸುವ ಅಶ್ವಮೇಧ ಕ್ಲಾಸಿಕ್ ಬಸ್ ನ ಪ್ರಯಾಣ ದರ ವಯಸ್ಕರಿಗೆ 600 ಹಾಗೂ ಮಕ್ಕಳಿಗೆ 450 ರೂ. ನಿಗದಿಪಡಿಸಲಾಗಿದೆ ಎಂದು ಕೆಎಸ್ಆರ್ಟಿಸಿ ಪ್ರಕಟಣೆ ತಿಳಿಸಿದೆ.
ಬೆಂಗಳೂರು-ಚಿಕ್ಕತಿರುಪತಿ ಪ್ರವಾಸದಲ್ಲಿ ಚಿಕ್ಕತಿರುಪತಿ, ಕೋಟಿಲಿಂಗೇಶ್ವರ, ಬಂಗಾರ ತಿರುಪತಿ, ಆವಣಿ, ಮುಳಬಾಗಿಲು, ಕುರುಡುಮಲೆ, ಕೋಲಾರ ಭಾಗದಲ್ಲಿ ಅಶ್ವಮೇಧ ಕ್ಲಾಸಿಕ್ ಬಸ್ ಸೇವೆ ಒದಗಿಸಲಿದ್ದು, ವಯಸ್ಕರಿಗೆ 600 ರೂ, ಮಕ್ಕಳಿಗೆ 450 ರೂ. ಪ್ರಯಾಣದರವಿದೆ. ಬೆಂಗಳೂರು ಮೇಲುಕೋಟೆ ಮಾರ್ಗದಲ್ಲಿ ಶ್ರೀರಂಗಪಟ್ಟಣ, ಕಲ್ಲಹಳ್ಳಿ, ಮೇಲುಕೋಟೆ ಪ್ರವಾಸಕ್ಕೆ ಅಶ್ವಮೇಧ ಕ್ಲಾಸಿಕ್ ಬಸ್ನಲ್ಲಿ ವಯಸ್ಕರಿಗೆ 670, ಮಕ್ಕಳಿಗೆ 500 ರೂ. ಪ್ರಯಾಣ ದರ ನಿಗದಿಪಡಿಸಲಾಗಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.





