ಬೆಂಗಳೂರು: ಕೆಪಿಎಸ್ಸಿ ವತಿಯಿಂದ ಸೆ.14, 15 ರಂದು ನಡೆಯಬೇಕಿದ್ದ ಕನ್ನಡ ಭಾಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಈ ಮೂಲಕ ಪರೀಕ್ಷಾರ್ಥಿಗಳಿಗೆ ಕೆಪಿಎಸ್ಸಿ ಮತ್ತೆ ಶಾಕ್ ಕೊಟ್ಟಿದೆ.
ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆಯನ್ನು ಸರ್ಕಾರ ನಿಡಿದ್ದು, ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿ ಅನ್ವಯವಾಗುವಂತೆ ವಯೋಮಿತಿಯಲ್ಲಿ ಸಡಿಲಿಕೆ ಮಾಡಲಾಗಿದೆ. ಹೀಗಾಗಿ ಸೆ.14, 15ರಂದು ನಡೆಯಬೇಕಿದ್ದ ಕೆಪಿಎಸ್ಸಿ ಗ್ರೂಪ್ ಬಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಅಭ್ಯರ್ಥಿಗಳನ್ನು ದೂರದ ಸ್ಥಳಗಳಿಗೆ ಪರೀಕ್ಷೆ ಬರೆಯಲು ನಿಗದಿಪಡಿಸಿದ್ದರಿಂದ. ನಿಗದಿಯಂತೆ ಪರೀಕ್ಷೆ ಬರೆಯಲು ಅಭ್ಯರ್ಥಿಗಳು ಹೀಗಾಗಲೇ ತಮ್ಮ ಪರೀಕ್ಷಾ ಜಿಲ್ಲಾ ಕೇಂದ್ರಗಳನ್ನು ತಲುಪಿದ್ದರು. ಆದರೆ, ಕೊನೆ ಕ್ಷಣದಲ್ಲಿ ಪರೀಕ್ಷೆ ಮೂಂದೂಡಿದ್ದರಿಂದ ಪರೀಕ್ಷಾರ್ಥಿಗಳು ಕಂಗೆಟ್ಟಿದ್ದಾರೆ.
ಪರೀಕ್ಷೆ ಮುಂದೂಡಿಕೆ ಬಗ್ಗೆ ಕೆಪಿಎಸ್ಸಿ ಪ್ರಕಟಣೆ ಹೀಗಿದೆ.
ಕರ್ನಾಟಕ ಲೋಕಸೇವಾ ಆಯೋಗದ ಅಧಿಸೂಚನೆ ಸಂಖ್ಯೆ : ಪಿಎಸ್ ಸಿ 1 ಆರ್ ಟಿ ಬಿ 1/2023, ದಿ:13-03-2024ರನ್ವಯ ಅಧಿಸೂಚಿಸಿರುವ ಉಳಿಕೆ ಮೂಲ ವೃಂದದಲ್ಲಿನ ವಿವಿಧ ಗ್ರೂಪ್ ಬಿ ಹುದ್ದೆಗಳಿಗೆ ದಿನಾಂಕ:14-09-2024 ಮತ್ತು 15-09-2024ರಂದು ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿ ಅಭ್ಯರ್ಥಿಗಳನ್ನು ಪರೀಕ್ಷಾ ಉಪ ಕೇಂದ್ರಗಳಿಗೆ ಹಂಚಿಕೆ ಮಾಡಲಾಗಿತ್ತು.
ಈ ಮಧ್ಯೆ ದಿನಾಂಕ: 10-09-2024ರ ಕರ್ನಾಟಕ ಸರ್ಕಾರದ ನಡವಳಿಗಳಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ಇಲಾಖೆಗಳ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ಹೊರಡಿಸಲಾಗಿರುವ ಅಧಿಸೂಚನೆಗಳಿಗೆ ಹಾಗೂ ಮುಂದಿನ ಒಂದು ವರ್ಷದಲ್ಲಿ ಹೊರಡಿಸಲಿರುವ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಟ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆಯನ್ನು ನೀಡಿ ಆದೇಶಿಸಿದೆ ” ಎಂದು ತಿಳಿಸಲಾಗಿರುತ್ತದೆ.
ಮೇಲ್ಕಂಡ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ದಿ:13-03-2024ರನ್ವಯ ಅಧಿಸೂಚಿಸಿರುವ ಎಲ್ಲಾ ಹುದ್ದೆಗಳಿಗೂ ವಯೋಮಿತಿ ಸಡಿಲಿಕೆ ಅನ್ವಯಿಸಿ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕಾಗಿರುತ್ತದೆ.
ಆದ್ದರಿಂದ ದಿನಾಂಕ:14-09-2024 ರ ಕನ್ನಡ ಭಾಷಾ ಪರೀಕ್ಷೆ ಮತ್ತು ದಿನಾಂಕ: 15-09-2024ರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಸದರಿ ಅಧಿಸೂಚನೆಯಲ್ಲಿನ ಹುದ್ದೆಗಳಿಗೆ ಇತರೆ ದಿನಾಂಕಗಳಲ್ಲಿ ನಿಗದಿಪಡಿಲಾಗಿದ್ದ ನಿರ್ದಿಷ್ಟ ಪತ್ರಿಕೆಗಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಹ ಮುಂದೂಡಲಾಗಿದೆ.
ಸರ್ಕಾರದ ಆದೇಶದಂತೆ ವಯೋಮಿತಿ ಸಡಿಲಿಕೆ ನೀಡಿ, ಅಭ್ಯರ್ಥಿಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಕಾಲಾವಾಕಾಶ ಮುಕ್ತಾಯವಾದ ನಂತರ ಪರಿಷ್ಕೃತ ಪರೀಕ್ಷಾ ದಿನಾಂಕಗಳನ್ನು ತಿಳಿಸಲಾಗುವುದು ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





