ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಅದೇಶ ಹೊರಡಿಸಿರುವ ನಿರ್ವಹಣಾ ಸಮಿತಿ ನಮಗೆ ಬೇಡ. ಕಾವೇರಿ ನೀರು ಹರಿಸುವುದನ್ನು ನಿಲ್ಲಿಸದಿದ್ದರೆ ಜೈಲ್ ಭರೋ ಚಳುವಳಿ ಮಾಡುತ್ತೇವೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾವೇರಿ ನಿರ್ವಹಣಾ ಸಮಿತಿ ಪ್ರತಿದಿನ 1ಟಿಎಂಸಿ ನೀರನ್ನು ಜುಲೈ.31ರವರೆಗೂ ಬಿಡುಗಡೆ ಮಾಡಬೇಕೆಂದು ಆದೇಶ ನೀಡಿದೆ. ಇದು ನಿಜವಾಗ್ಲೂ ಕರ್ನಾಟಕಕ್ಕೆ ಹಾಗೂ ನಮ್ಮ ರೈತರಿಗೆ ಅನ್ಯಾಯವಾದಂತಾಗಿದೆ. ನಮ್ಮ ಕೆರೆಗಳಲ್ಲಿ ನೀರಿಲ್ಲ. ನಮ್ಮ ಬೆಳೆಗಳು ನಾಶವಾಗುತ್ತಿವೆ. ಎಲ್ಲಾ ಜಲಾಶಯಗಳಲ್ಲಿ ಸದ್ಯ 60 ಟಿಎಂಸಿ ನೀರು ಇರಬಹುದು. ಈಗಿನ ಪರಿಸ್ಥಿತಿಯಲ್ಲಿ 90-95ಟಿಎಂಸಿ ನೀರು ಇರಬೇಕಿತ್ತು. ಆದರೆ, ನೀರು ತುಂಬಾ ಕಡಿಮೆ ಇದ್ದರೂ ನಿರ್ವಹಣಾ ಪ್ರಾಧಿಕಾರ ಕಾವೇರಿ ಜಲಾಶಯದಿಂದ ನೀರು ಬಿಡುವಂತೆ ಆದೇಶ ಹೊರಡಿಸುವುದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಮುಂದುವರಿದು ಮಾತನಾಡಿದ ವಾಟಾಳ್ ನಾಗರಾಜ್ ಅವರು, ರಾಜ್ಯದ ಎಲ್ಲಾ ಸಂಸದರು ರಾಜ್ಯದ ಪರವಾಗಿ ಏನು ಮಾಡ್ತಾರೆ.? ಎಲ್ಲಾ ಸಂಸದರು ಕೂಡಲೇ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಹೋಗಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಬೇಕು. ಇದು ಗಂಭೀರವಾದ ಪರಿಸ್ಥಿತಿ ಎಂದು ಕಿಡಿಕಾರಿದರು.