ಬೆಂಗಳೂರು: ಬಂಡೀಪುರ ಅರಣ್ಯ ಪ್ರದೇಶದೊಳಗಿಂದ ರಾತ್ರಿ ವೇಳೆ ಸೀಮಿತ ವಾಹನಗಳ ಸಂಚಾರಕ್ಕೆ ಒಪ್ಪಿಗೆ ನೀಡಿರುವುದಕ್ಕೆ ನೀವು ಕರ್ನಾಟಕ ಅರಣ್ಯ ಸಚಿವರೋ ಅಥವಾ ಕೇರಳ ಅರಣ್ಯ ಸಚಿವರೋ ಎಂದು ಪ್ರಶ್ನಿಸುವ ಮೂಲಕ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಬಂಡೀಪುರ ಅರಣ್ಯದಲ್ಲಿ ವನ್ಯಜೀವಿಗಳ ಸಂರಕ್ಷಣೆ ಮಾಡಬೇಕಿರುವುದು ರಾಜ್ಯ ಸರ್ಕಾರದ ಕರ್ತವ್ಯ ಅದನ್ನು ಬಿಟ್ಟು ಕೇರಳದ ಲಾಭಿಗೆ ಮಣಿದು ರಾತ್ರಿ ವೇಳೆ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಓಡಾಡಲು ಅವಕಾಶ ಮಾಡಿಕೊಡುವ ಮೂಲಕ ವನ್ಯಜೀವಿಗಳ ಜೀವಕ್ಕೆ ಅಪಾಯ ತಂದೊಡ್ಡಿದ್ದೀರಿ ಎಂದು ದೂರಿದೆ.
ಈ ಹಿಂದೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕನ್ನಡದ ತೆರಿಗೆ ಹಣವನ್ನು ನೀಡಿದ್ದೀರಿ. ಈಗ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ಮೆಚ್ಚಿಸಲು ಈ ರೀತಿಯ ನಿರ್ಧಾರ ಮಾಡಿದ್ದೀರಾ. ನೀವು ಕರ್ನಾಟಕದ ವ್ಯಾಪ್ತಿಗೆ ಬರುವ ಬಂಡೀಪುರ ಅರಣ್ಯ ಪ್ರದೇಶದ ರಕ್ಷಣೆಗೆ ನಿಂತಿದ್ದರೋ ಅಥವಾ ವನ್ಯಜೀವಿಗಳ ಸರ್ವನಾಶಕ್ಕೆ ನಿಂತಿದ್ದೀರೂ ಎಂದು ಬಿಜೆಪಿ ಖಂಡ್ರೆ ಅವರನ್ನು ಪ್ರಶ್ನಿಸಿದೆ.





