Mysore
17
overcast clouds

Social Media

ಮಂಗಳವಾರ, 10 ಫೆಬ್ರವರಿ 2026
Light
Dark

ಕೆನಡಾದಲ್ಲಿ ಕನ್ನಡಿಗ ಚಂದನ್‌ ಕುಮಾರ್‌ ಸಾವು: ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಪರಮೇಶ್ವರ್‌

ಬೆಂಗಳೂರು: ಕೆನಡಾದಲ್ಲಿ ಕೊಲೆಯಾದ ಚಂದನ್ ಕುಮಾರ್ ಪಾರ್ಥಿವ ಶರೀರವನ್ನು ಶೀಘ್ರವೇ ಭಾರತಕ್ಕೆ ತರಲು ಪ್ರಯತ್ನಿಸುತ್ತಿರುವುದಾಗಿ ಎಂದು ಗೃಹ ಸಚಿವ ಪರಮೇಶ್ವರ್‌ ಭರವಸೆ ನೀಡಿದ್ದಾರೆ.

ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದು ತ್ಯಾಮಗೊಂಡ್ಲುಗೆ ಭೇಟಿ ನೀಡಿ, ತಂದೆ ತಾಯಿಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ನೆಲಮಂಗಲ ಕ್ಷೇತ್ರದ ಮಾಜಿ ಶಾಸಕ ಡಾ.ಶ್ರೀನಿವಾಸ ಮೂರ್ತಿ ಚಂದನ್ ಕುಮಾರ್ ಮನೆಗೆ ಭೇಟಿ ನೀಡಿದ್ದರು. ಅಲ್ಲಿಂದಲೇ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ದೂರವಾಣಿ ಕರೆ ಮಾಡಿದ್ದರು. ಆ ವೇಳೆ ಚಂದನ್ ಅವರ ತಂದೆ ತಾಯಿ ಜೊತೆ ಮಾತನಾಡಿದ ಕುಮಾರಸ್ವಾಮಿಯವರು ಭಾರೀ ಅನ್ಯಾಯವಾಗಿ ಹೋಗಿದೆ ಎಂದು ವಿಷಾದಿಸಿದ್ದಾರೆ.

ತಾವು ರಾಯಭಾರ ಕಚೇರಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಪಾರ್ಥಿವ ಶರೀರವನ್ನು ಆದಷ್ಟು ಶೀಘ್ರವಾಗಿ ತರಲು ಯತ್ನಿಸುವುದಾಗಿ ಭರವಸೆ ನೀಡಿದ್ದಾರೆ. ಚಂದನ್ ಅವರ ತಂದೆ, ತಮ್ಮ ಪುತ್ರನನ್ನು ತಾಯ್ನಾಡಿನಲ್ಲೇ ಸಂಸ್ಕಾರ ಮಾಡಬೇಕು. ಮೃತದೇಹ ತರಲು ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.

ನನ್ನ ಮಗನಿಗೆ ಕೆನಡಾಗೆ ಹೋಗುವುದು ಬೇಡ. ಇಲ್ಲೆ? ಇರು ಎಂದು ಒತ್ತಾಯ ಮಾಡಿದ್ದೆ. ಮದುವೆಯಾಗುವಂತೆಯೂ ಹೇಳಿದ್ದೆ. ವಿದೇಶಕ್ಕೆ ಹೋಗುವ ಅವಕಾಶ ಸಿಕ್ಕಾಗ ಬಿಡಬಾರದು ಎಂದು ಹೇಳಿ ನನ್ನನ್ನೇ ಸಮಾಧಾನ ಮಾಡಿದ್ದ ಎಂದು ತಂದೆ ಕಣ್ಣೆರು ಹಾಕಿದ್ದಾರೆ.

ಗೃಹ ಸಚಿವ ಪರಮೇಶ್ವರ್ ಭೇಟಿಯ ವೇಳೆ ತಾಯಿ ಶೈಲಜಾ, ತಮ್ಮ ಪುತ್ರನ ಪ್ರತಿಭೆಯ ಬಗ್ಗೆ ಗುಣಗಾನ ಮಾಡಿ ದುಃಖ ತೋಡಿಕೊಂಡಿದ್ದಾರೆ. ಅರೆಕಾಲಿಕ ಉದ್ಯೋಗ ಮಾಡಿಕೊಂಡು ಎಂಜಿನಿಯರಿಂಗ್ ಓದಿದ್ದ ಚಂದನ್, ಕ್ರೀಡೆ, ಓದು ಎಲ್ಲದರಲ್ಲೂ ಮುಂದಿದ್ದ. ಸ್ವಂತ ಪ್ರತಿಭೆಯ ಮೇಲೆ ಕೆನಡಾದಲ್ಲಿ ಉದ್ಯೋಗ ಗಿಟ್ಟಿಸಿದ್ದ. ನಮಗೆ ಯಾವ ಸಂದರ್ಭದಲ್ಲಿಯೂ ಒಂದಿಷ್ಟೂ ಕಷ್ಟ ಕೊಟ್ಟಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ನಾವು ಆತನ ಮೇಲೆ ಜೀವವನ್ನೇ ಇಟ್ಟುಕೊಂಡಿದ್ದೇವು. ಅವನಿಲ್ಲದ ಜೀವನ ನಮಗೆ ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾವು ಇನ್ನೇಕೆ ಜೀವದಿಂದ ಇರಬೇಕು ಎಂಬ ನಿರಾಸೆ ಕಾಡುತ್ತಿದೆ ಎಂದಿದ್ದಾರೆ.

ತಮ್ಮ ಪುತ್ರನ ಪ್ರತಿಭೆ ಹಾಗೂ ಒಳ್ಳೆಯತನದ ಬಗ್ಗೆ ಹೊಗಳುವುದು ಇಷ್ಟವಾಗುತ್ತಿರಲಿಲ್ಲ. ನಾನು ಹೆಮೆಯಿಂದ ಯಾರ ಬಳಿಯಾದರೂ ಹೇಳಿಕೊಂಡರೆ, ಆ ರೀತಿ ಹೇಳಬೇಡ ಎಂದು ನನ್ನನ್ನೆ ಬಯ್ಯುತ್ತಿದ್ದ. ವಿದೇಶದಲ್ಲಿರುವ ಉದ್ಯೋಗಾವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ. ಕೆನಾಡಾಗೆ ಯಾರೇ ಬರುವುದಿದ್ದರೂ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದ್ದ ಎಂದು ಗೃಹ ಸಚಿವರಿಗೆ ವಿವರಿಸಿದ್ದಾರೆ.

ಕೆನಡಾದಲ್ಲಿ ಕನ್ನಡಾಭಿಮಾನ ಬಿತ್ತುವಲ್ಲಿ ಚಂದನ್ ಪಾತ್ರ ಪ್ರಮುಖವಾಗಿತ್ತು. ಕನ್ನಡ ಚಿತ್ರಗಳನ್ನು ಅಲ್ಲಿ ಬಿಡುಗಡೆ ಮಾಡಿಸಲು ಯತ್ನಿಸುತ್ತಿದ್ದರು ಎಂದು ಅವರ ಸ್ನೇಹಿತರು ಹೇಳಿದ್ದಾರೆ. ಸಚಿವ ಪರಮೇಶ್ವರ್, ಇದು ಆಗಬಾರದಿತ್ತು. ಧೈರ್ಯ ತಂದುಕೊಳ್ಳಿ. ನಾವು ನಿಮ್ಮ ಜೊತೆಗಿದ್ದೇವೆ ಎಂದು ಪೋಷಕರಿಗೆ ಧೈರ್ಯ ಹೇಳಿದ್ದಾರೆ.

Tags:
error: Content is protected !!