ಹುಬ್ಬಳ್ಳಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹಿಂದೂತ್ವದ ಪರ ನಿಲುವು ಪ್ರಕಟಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಇಂದು(ಮಾರ್ಚ್.1) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಡಿ.ಕೆ.ಶಿವಕುಮಾರ್ ಅವರಿಗೆ ಇವಾಗ ಬುದ್ಧಿ ಬಂದಿದೆ. ಅಂತೆಯೇ ಸಿಎಂ ಸಿದ್ದರಾಮಯ್ಯ ಅವಇಗೂ ಬುದ್ಧಿ ಬರಲಿ. ಆದರೆ ಡಿ.ಕೆ.ಶಿವಕುಮಾರ್ ಅವರ ಹಿಂದುತ್ವದ ನಿಲುವು ನಾಟಕವೋ ಅಥವಾ ನಿಜವೋ ಎಂಬುದನ್ನು ದೇವರು ನಿರ್ಧಾರಿಸುತ್ತಾನೆ ಎಂದರು.
ಸ್ವಾತಂತ್ರ್ಯದ ಪೂರ್ವದ ಕಾಂಗ್ರೆಸ್ಸಿಗರು ಹೋರಾಟ ಮಾಡಿದ್ದೇ ಹಿಂದುತ್ವವನ್ನು ಮತ್ತೆ ವೈಭವೀಕರಿಸುವ ಉದ್ದೇಶದಿಂದಲೇ, ಹಾಗಾಗಿ ಹಳೇ ಕಾಂಗ್ರೆಸ್ಸಿಗರ ರಕ್ತದಲ್ಲಿ ಹಿಂದುತ್ವ ಈಗಲೂ ಇದೆ. ಇಲ್ಲಿ ಎಲ್ಲರೂ ಧರ್ಮ ದ್ರೋಹಿಗಳಲ್ಲ, ಆದರೆ ಕೆಲವು ರಾಜಕೀಯ ನಾಯಕರು ಮತಬ್ಯಾಂಕ್ಗಾಗಿ ಮುಸಲ್ಮಾನರನ್ನು ಓಲೈಸುವ ನಿಟ್ಟಿನಲ್ಲಿ ನಾಟಕೀಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
ಇನ್ನು ಮಹಾತ್ಮಗಾಂಧೀಜಿ ಅವರು ಸಹ ಹಿಂದೂತ್ವ ಪ್ರತಿಪಾದಿಸಿದ್ದರು. ಅವರ ಸಮಾಧಿ ಮೇಲೆ ಹೇ ರಾಮ್ ಎಂದು ಬರೆಯಲಾಗಿದೆಯೇ ಹೊರತು, ಹೇ ಅಲ್ಲ ಅಥವಾ ಹೇ ಯೇಸು ಎಂದು ಬರೆದಿಲ್ಲ. ಅಂತೆಯೇ ಡಿಕೆಶ ಅವರು ಮಹಾಕುಂಭಮೇಳದಲ್ಲಿ ಭಾಗವಹಿಸಿದ್ದಾರೆ. ಅವರಿಗೆ ಹಿಂದುತ್ವದ ಜಾಗೃತಿ ಉಂಟಾಗಿದೆ. ಹಿಂದೂತ್ವ ಬಿಜೆಪಿಯ ಸ್ವತ್ತೂ ಅಲ್ಲ, ಅದೂ ಸರ್ವ ಜನರ ಸುಖ ಬಯಸುವುದೇ ಹಿಂದುತ್ವ ಎಂದು ಹೇಳಿದರು.





