ಬೆಂಗಳೂರು: ರಾಜ್ಯದ ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ನೋ ಸ್ಟಾಕ್ ಬೋರ್ಡ್ ಹಾಕಿರಬಹುದು. ಆದರೆ ಅಕ್ಕಿಗೆ ಕೊರತೆ ಇಲ್ಲ, ಎಲ್ಲೋ ಸರಬರಾಜು ಸಮಸ್ಯೆ ಆಗಿರಬಹುದು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಮಾರ್ಚ್.17) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಈ ತಿಂಗಳ ಕೊನೆಯವರೆಗೂ ಅಕ್ಕಿಯನ್ನು ವಿತರಣೆ ಮಾಡಬೇಕೆಂದು ಸೂಚನೆ ನೀಡಲಾಗಿದೆ. ಅಕ್ಕಿಯನ್ನು ಎಲ್ಲಾ ಕಡೆಗಳಿಗೂ ಪೂರೈಕೆ ಮಾಡಲಾಗಿದ್ದು, ಯಾವುದೇ ಕೊರತೆ ಇಲ್ಲ. ಆದರೆ ಸಾಗಾಣಿಕೆಯಲ್ಲಿ ಸ್ವಲ್ಪ ವ್ಯತ್ಯಾಸ ಆಗಿರಬಹುದು ಅಷ್ಟೇ. ಪೂರೈಕೆ ಆಗುವಷ್ಟು ಅಕ್ಕಿ ಖರೀದಿ ಮಾಡಿ ದಾಸ್ತಾನುನಲ್ಲೀಡಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಎರಡು ತಿಂಗಳ ಅಕ್ಕಿಯನ್ನು ಒಂದೇ ತಿಂಗಳು ನೀಡಬೇಕಾಗಿರುವುದರಿಂದ ಕೆಲ ಕಡೆ ಸಮಸ್ಯೆ ಆಗಿರಬಹುದು. ತೊಂದರೆಯಾಗಿರುವ ನ್ಯಾಯಬೆಲೆಗಳನ್ನು ಗುರುತಿಸಿ ಪರಿಹರಿಸಲಾಗುವುದು ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ದಾರರು ಅಕ್ಕಿ ತೆಗೆದುಕೊಂಡು ಮಾರಿದರೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ನ್ಯಾಯಬೆಲೆ ಅಂಗಡಿಗಳಲ್ಲಿ ಕೊಡುವ ಅಕ್ಕಿಯನ್ನು ತೆಗೆದುಕೊಂಡು ಯಾವುದೇ ಬಿಪಿಎಲ್ ಕಾರ್ಡ್ದಾರರು ಮಾರಾಟ ಮಾಡಿದರೆ ಅಂತಹವರ ವಿರುದ್ಧ ವಿಚಾರಣೆ ಮಾಡಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.





