ಬೆಂಗಳೂರು: ಹಾಸನ ಹಾಗೂ ವಿಜಯಪುರದಲ್ಲಿ ನಡೆಸಿದ ಮಾದರಿಯಲ್ಲೇ ಬೆಂಗಳೂರಿನಲ್ಲೂ ಜೆಡಿಎಸ್ ಪಕ್ಷದ ರಜತ ಮಹೋತ್ಸವ ಹಾಗೂ ಜನತಾ ಸಮಾವೇಶವನ್ನು ನಡೆಸಲು ತೀರ್ಮಾನಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ನಡೆಯಲಿರುವ ಚುನಾವಣೆ ಸಿದ್ಧತೆಯ ಹಿನ್ನೆಲೆಯಲ್ಲಿ ಈ ಸಮಾವೇಶ ಹೆಚ್ಚಿನ ಮಹತ್ವ ಪಡೆದುಕೊಳ್ಳಲಿದೆ.
ಏ.11 ರಂದು ನಗರದ ಹೊರವಲಯದ ಕೊಮಗಟ್ಟದ ಬಳಿಯ ಮೈದಾನದಲ್ಲಿ ಸಮಾವೇಶವನ್ನು ನಡೆಸಲು ಉದ್ದೇಶಿಸಲಾಗಿದೆ. ಈಗಾಗಲೇ ಹಾಸನ ಹಾಗೂ ವಿಜಯಪುರಗಳಲ್ಲಿ ನಡೆಸಿದ ಸಮಾವೇಶ ಯಶಸ್ವಿಯಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೂ ಬೃಹತ್ ಸಮಾವೇಶ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಲು ನಿರ್ಧರಿಸಲಾಗಿದೆ.
ಮುಂಬರುವ ಚುನಾವಣೆಗಳಿಗೆ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಸಜ್ಜುಗೊಳಿಸುವುದು, ಚುನಾವಣಾ ಪೂರ್ವ ಸಿದ್ಧತೆಗಳ ಬಗ್ಗೆ ಮಾರ್ಗದರ್ಶನ ಮಾಡುವುದು, ಪಕ್ಷಸಂಘಟನೆಗಾಗಿ ಸದಸ್ಯತ್ವ ನೋಂದಣಿಯನ್ನು ಇನ್ನಷ್ಟು ಹೆಚ್ಚಿಸಲು ಜನಪರ ಹೋರಾಟಗಳನ್ನು ಹಮಿಕೊಳ್ಳುವ ರೂಪುರೇಷೆ ನಿರ್ಧರಿಸುವುದು, 25 ವರ್ಷಗಳಲ್ಲಿ ಪಕ್ಷ ಬೆಳೆದುಬಂದ ಹೆಜ್ಜೆಗುರುತುಗಳನ್ನು ಅವಲೋಕಿಸುವುದು ಮೊದಲಾದ ವಿಚಾರಗಳು ಸಮಾವೇಶದ ಪ್ರಮುಖ ಅಂಶಗಳಾಗಿವೆ.
ಬೆಂಗಳೂರಿನ ಸಮಾವೇಶದ ಪೂರ್ವ ಸಿದ್ಧತೆಯನ್ನು ಈಗಾಗಲೇ ಪಕ್ಷದ ವತಿಯಿಂದ ಆರಂಭಿಸಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಜೆಡಿಎಸ್ ಅಧ್ಯಕ್ಷ ಎಚ್.ಎಂ.ರಮೇಶ್ಗೌಡ, ಮಾಜಿ ವಿಧಾನಪರಿಷತ್ ಸದಸ್ಯ ಇ.ಕೃಷ್ಣಪ್ಪ ಮೊದಲಾದ ಮುಖಂಡರ ಅಧ್ಯಕ್ಷತೆಯಲ್ಲಿ ಸಮಾವೇಶದ ಪೂರ್ವ ತಯಾರಿ ಕುರಿತ ಸಭೆ ನಡೆಸಲಾಗಿದೆ.
ಈಗಾಗಲೇ ಪಕ್ಷದ ವತಿಯಿಂದ ನಡೆಸಿರುವ ಎರಡು ಸಮಾವೇಶಕ್ಕಿಂತಲೂ ಉತ್ತಮ ರೀತಿಯಲ್ಲಿ ಈ ಬೆಂಗಳೂರಿನ ಸಮಾವೇಶ ಯಶಸ್ವಿಗೊಳಿಸಲು ಬೇಕಾದ ಸಿದ್ಧತೆ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗಿದೆ.





