Mysore
24
scattered clouds

Social Media

ಭಾನುವಾರ, 01 ಫೆಬ್ರವರಿ 2026
Light
Dark

ಬೆಂಗಳೂರು ವಿವಿಗೆ ಮನಮೋಹನ್‌ ಸಿಂಗ್‌ ಹೆಸರಿಡಲು ಜೆಡಿಎಸ್‌ ವಿರೋಧ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಹೆಸರಿಡಲು ಜೆಡಿಎಸ್‌ ವಿರೋಧ ವ್ಯಕ್ತಪಡಿಸಿದ್ದು, ಬೆಂಗಳೂರು ವಿವಿ ನಿಮ್ಮ ಮನೆತನ ಆಸ್ತಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದೆ.

ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ರಾಜ್ಯ ಜೆಡಿಎಸ್‌ ಪಕ್ಷವು, ಬೆಂಗಳೂರು ಎಂಬುದು ಈ ನೆಲಮೂಲದ ಹೆಗ್ಗುರುತು. ಸಮಸ್ತ ಕನ್ನಡಿಗರ ಹೆಮ್ಮೆ ಹಾಗೂ ಕನ್ನಡಿಗರ ಪ್ರತಿಧ್ವನಿ. ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದ ನಗರ. ಬೆಂಗಳೂರು ಎಂಬುದೇ ಒಂದು ವಿಶ್ವ ಪ್ರಸಿದ್ಧ ಬ್ರ್ಯಾಂಡ್. ಅದೇ ಬೆಂಗಳೂರು ಹೆಸರಿಗೆ ಇರುವ ಶಕ್ತಿ.

ನಮಗೆ ಡಾ.ಮನಮೋಹನ್ ಸಿಂಗ್ ಅವರ ಮೇಲೆ ಅಪಾರವಾದ ಗೌರವವಿದೆ. ಆದರೆ “ಬೆಂಗಳೂರು ನಗರ ವಿವಿ”ಗೆ ಪರ್ಯಾಯವಾಗಿ ಬೇರೆ ಯಾವುದೇ ಹೆಸರಿಡಲು ತೀವ್ರ ವಿರೋಧವಿದೆ. ಈ ವಿಚಾರದಲ್ಲಿ ಕರ್ನಾಟಕದ ಜನತೆಯೂ ಸಹ ಕಾಂಗ್ರೆಸ್ ಸರ್ಕಾರದ ಈ ನಿರ್ಧಾರವನ್ನು ಒಪ್ಪುವುದಿಲ್ಲ.

ರಾಜ್ಯದಲ್ಲಿ ಕನ್ನಡ ಭಾಷೆ, ನೆಲ, ಜಲ ನಾಡಿಗಾಗಿ ಹೋರಾಡಿದ ಸಾವಿರಾರು ಕನ್ನಡಿಗ ಸಾಧಕರು ಇದ್ದಾರೆ. ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಕರ್ನಾಟಕಕ್ಕೆ ಕೀರ್ತಿ ತಂದ ಮಹನೀಯರಿದ್ದಾರೆ. ಆ ಕನ್ನಡಿಗರು ಕಾಂಗ್ರೆಸ್ಸಿಗರ ಕಣ್ಣಿಗೆ ಬೀಳಲಿಲ್ಲವೇ? ಎಂದು ಪ್ರಶ್ನೆ ಮಾಡಿದೆ.

ಸಿದ್ದರಾಮಯ್ಯನವರೇ ಅಷ್ಟು ಅಭಿಮಾನ, ಗೌರವ ಇದ್ದರೆ ಮೈಸೂರಿನಲ್ಲಿ ನಿರ್ಮಿಸುತ್ತಿರುವ ನಿಮ್ಮ ಹೊಸ ಮನೆಗೆ ಮನಮೋಹನ್ ಸಿಂಗ್ ನಿವಾಸ ಎಂದು ಹೆಸರಿಟ್ಟುಕೊಳ್ಳಿ. ನಿಮ್ಮ ಸೊಸೆಯ ಒಡೆತನದಲ್ಲಿರುವ ಬಹುಕೋಟಿ ಮೌಲ್ಯದ ಐಶಾರಾಮಿ ಕ್ಲಬ್‌ಗೆ ಮರು ನಾಮಕರಣ ಮಾಡಿಕೊಳ್ಳಿ.

ದೆಹಲಿಯ ಹೊಸದಾಗಿ ನಿರ್ಮಿಸಿದ ಕಾಂಗ್ರೆಸ್‌ ಕಚೇರಿಗೆ “ಇಂದಿರಾ ಭವನ”‌ ಎಂದು ಹೆಸರಿಟ್ಟಿರಿ. ಅದಕ್ಕೆ ಮನಮೋಹನ್‌ ಸಿಂಗ್‌ ಹೆಸರಿಡಲು ಇಟಲಿ ಕಾಂಗ್ರೆಸ್‌ನ ಆಪ್ತರ ಗುಂಪು ಒಪ್ಪಲಿಲ್ಲ ಎಂಬುದು ತಮಗೆ ತಿಳಿದಿರುವ ವಿಷಯ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಆಡಳಿತವಿರುವ ಕಾರಣ “ಗುಲಾಮಿ ಕಾಂಗ್ರೆಸ್‌” ನಾಯಕರು, ಬೆಂಗಳೂರಿನಲ್ಲಿ ಬೇಳೆ ಬೇಯಿಸಿಕೊಳ್ಳುತ್ತೀರಿ.

ಕೆಲ ತಿಂಗಳ ಹಿಂದಷ್ಟೆ ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ಕಂಚಿನ ಪ್ರತಿಮೆ ಅನಾವರಣಗೊಳಿಸಲಾಗಿತ್ತು. ಈಗ ಬೆಂಗಳೂರು ವಿವಿಗೆ ಮನಮೋಹನ್‌ ಸಿಂಗ್‌ ಹೆಸರು ನಾಮಕರಣ ಮಾಡುವುದಾಗಿ ಘೋಷಿಸಿದ್ದೀರಿ ಎಂದು ಕಿಡಿಕಾರಿದೆ.

 

Tags:
error: Content is protected !!