Mysore
30
scattered clouds

Social Media

ಬುಧವಾರ, 11 ಮಾರ್ಚ್ 2026
Light
Dark

ನಾನು ಕ್ರಿಕೆಟ್‌ ಫಾಲೋವರ್‌ ಹೊರತು, ಫ್ಯಾನ್‌ ಅಲ್ಲ : ಸಿದ್ದರಾಮಯ್ಯ

cm siddaramaiah

ಬೆಂಗಳೂರು : ನಾನು ಕ್ರಿಕೆಟ್‍ಪಟುವಲ್ಲ. ಕ್ರಿಕೆಟ್ ಫಾಲೋವರ್ ಹೊರತು ಫ್ಯಾನ್ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಗೆ ತಿಳಿಸಿದರು.

ಆರ್.ಸಿ.ಬಿ ಕಾಲ್ತುಳಿತದ ಘಟನೆಗೆ ಸಂಬಂಧಿಸಿದಂತೆ ನಿಯಮ 69ರಡಿ ನಡೆದ ಚರ್ಚೆಗೆ ಉತ್ತರಿಸಿದ ಅವರು, ನಾನು ಕಬಡ್ಡಿ ಆಟಗಾರ. ಯಾವತ್ತು ಕ್ರಿಕೆಟ್ ಆಡಿಲ್ಲ. ಶಾಸಕ ದಿನಾಚರಣೆ ಸಂದರ್ಭದಲ್ಲಿ ಕ್ರೀಡೆ ಆಡುವಾಗ ಸಕಲೇಶಪುರದ ಮಾಜಿ ಶಾಸಕ ವಿಶ್ವನಾಥ್ ಅವರು ನನ್ನ ಮೇಲೆ ಬಿದ್ದರು. ಆಗ ನನ್ನ ಮಂಡಿಗೆ ಪೆಟ್ಟಾಗಿತ್ತು. 2005ರಲ್ಲಿ ಜೆಡಿಎಸ್‍ನಿಂದ ನನ್ನನ್ನು ಉಚ್ಚಾಟಿಸಿದಾಗ ಹುಬ್ಬಳ್ಳಿಯಲ್ಲಿ ನಡೆದ ಅಹಿಂದ ಸಮಾವೇಶಕ್ಕೆ ಕುಂಟುಕೊಂಡೇ ಹೋಗಿದ್ದೆ ಎಂದು ಸ್ಮರಿಸಿದರು.

ಉತ್ತರದ ನಡುವೆ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಮಾತನಾಡಿ, ಸಚಿವ ಜಮೀರ್ ಅಹದ್ ಅವರು ನಿಮಗೆ ಕನ್ನಡ ಕಲಿಸುತ್ತಾರೆ ಎಂದಾಗ ಮುಖ್ಯಮಂತ್ರಿ ಮಾತೃಭಾಷೆ ಕನ್ನಡ. ನಿಮಗೇ ಕನ್ನಡ ಸರಿಯಾಗಿ ಬರುವುದಿಲ್ಲ. ನಿಮ್ಮ ತಂದೆ ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿದ್ದರು ಎಂದರಲ್ಲದೆ, ಕಷ್ಟ ಕಾಲದಲ್ಲಿ ನನ್ನ ನೆರವಿಗೆ ನೀವು ಬರುವುದಿಲ್ಲವೇ ಎಂದು ಮತ್ತೊಬ್ಬ ಬಿಜೆಪಿ ಶಾಸಕ ಸಿ.ಸಿ.ಪಾಟೀಲ್ ಅವರನ್ನು ಪ್ರಶ್ನಿಸಿದರು.

ಪರಮೇಶ್ವರ್ ಅವರು ನಗುತ್ತಿದ್ದಾರೆ. ಅದಕ್ಕೆ ನನಗೂ ನಗು ಬಂತು ಎಂದು ವಿರೋಧ ಪಕ್ಷದ ನಾಯಕ ಅಶೋಕ್ ಹೇಳಿದಾಗ, ಯಾವಾಗಲೂ ನಗುತ್ತಿರಬೇಕು. ಪರಮೇಶ್ವರ್ ಅವರಿಗೆ ಖುಷಿಯಾಗಿದೆ ಎನ್ನುವುದಕ್ಕಿಂತೆ ನಿಮಗೆ ಖುಷಿಯಾಗಿದೆ. ಪರಮೇಶ್ವರ್ ಅವರು ಆರ್.ಸಿ.ಬಿ ವಿಚಾರಕ್ಕೆ ಸಂಬಂಧಿಸಿದಂತೆ ಸಮರ್ಥವಾದ ಉತ್ತರ ಕೊಟ್ಟಿದ್ದಾರೆ. ಅವರ ಶಕ್ತಿ, ಸಾಮರ್ಥ್ಯವೂ ನನಗೆ ಗೊತ್ತು ಎಂದರು.

ಅಶೋಕ್ ನನಗೆ ಒಳ್ಳೆಯ ಸ್ನೇಹಿತರು. ವಿಧಾನಸಭೆಯಲ್ಲಿ ಒಂದು ಥರ, ಹೊರಗೆ ಇನ್ನೊಂದು ಥರ ಇರುತ್ತಾರೆ ಎಂದಾಗ, ಅಶೋಕ್ ಅವರು ಸ್ಥಾನದ ಮಹಿಮೆ ಇರಬೇಕು ಎಂದರು. ಆಗ ಮುಖ್ಯಮಂತ್ರಿಗಳು ಮಹಿಮೆಗಿಂತ ಜವಾಬ್ದಾರಿ ಎಂದು ಹೇಳಿದರು.

ಬಿಜೆಪಿ ಶಾಸಕ ಸುನೀಲ್‍ಕುಮಾರ್ ಅವರು ಒಳಗೊಂದು, ಹೊರಗೊಂದು ಸ್ನೇಹದ ಬಗ್ಗೆ ವಿವರಣೆ ಕೊಡಿ ಎಂದು ಪ್ರಶ್ನಿಸಿದರು. ಆಗ ಸಿದ್ದರಾಮಯ್ಯನವರು ನೀವೊಬ್ಬರೇ ಸಿಕ್ಕಾಗ ಹೇಳುವೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

Tags:
error: Content is protected !!