ಮಂಗಳೂರು: ಕೊಡಗಿನಲ್ಲಿ ಇತ್ತೀಚೆಗೆ ಒಬ್ಬ ಹಿಂದೂ ಇರಿತಕ್ಕೊಳಗಾಗಿ ಒಬ್ಬ ಮುಸ್ಲಿಂ ತೀರಿ ಹೋದ. ಅದು ವೈಯಕ್ತಿಕ ಕಾರಣದಿಂದ ಆಗಿದ್ದು, ಅದು ದೊಡ್ಡ ಗಲಾಟೆ ಆಗಿಲ್ಲ. ನಮ್ಮ ಅದೃಷ್ಟ ಏನಂದ್ರೆ ಈ ಘಟನೆಯಲ್ಲಿ ಮುಸ್ಲಿಂ ಬದಲಿಗೆ ಹಿಂದೂ ತೀರಿ ಹೋಗಿದ್ರೆ ಇಡೀ ಊರಿಗೆ ಬೆಂಕಿ ಹಚ್ಚಿರೋರು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬೇಸರ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೈತಿಕ ಪೊಲೀಸ್ ಗಿರಿಯಲ್ಲಿ ಹಿಂದೂ ಮುಸ್ಲಿಂ ಇದ್ರೆ ಇವರಿಗೆ ಅರ್ಥ ಬೇರೆಯೇ ಆಗಿರುತ್ತದೆ. ಯಾರೇ ಕಾನೂನನ್ನು ಕೈಗೆತ್ತಿಕೊಂಡರೂ ಕ್ರಮ ಆಗುತ್ತದೆ. ಇತ್ತೀಚೆಗೆ ಮೂರು ಜನರ ಬಂಧನ ಆಗಿದೆ. ಇದು ಜಿಲ್ಲೆಗೆ ಕೆಟ್ಟ ಹೆಸರು, ಇಡೀ ದಕ್ಷಿಣ ಕನ್ನಡಕ್ಕೆ ಇದು ಕಳಂಕ. ಇದೇ ಕಾರಣಕ್ಕೆ ಇವತ್ತು ಬೇರೆ ಜನರು ಇಲ್ಲಿಗೆ ಬರುತ್ತಿಲ್ಲ. ಈ ಕಳಂಕದಿಂದ ಜಿಲ್ಲೆ ಹೊರ ಬರಬೇಕು. ಸುರಕ್ಷಿತ ವಾತಾವರಣ ಸೃಷ್ಟಿಯಾಗಬೇಕು ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಆರ್ಎಸ್ಎಸ್, ಭಜರಂಗದಳ ಪ್ರಚೋದನೆ ಮಾಡುತ್ತಿದೆ. ಇವರ ಪ್ರಚೋದನೆಯಲ್ಲಿ ಇವರು ಹೇಳಿದ್ದೇ ನಡೀಬೇಕು ಎಂದುಕೊಂಡಿದ್ದಾರೆ. ಇದು ಹಿಂದೂ ದೇಶ, ಹಿಂದುತ್ವ ಎನ್ನುತ್ತಿದ್ದಾರೆ. ಆಂಟಿ ಕಮ್ಯನಲ್ ವಿಂಗ್ ಫೆಲ್ಯೂರ್ ಅಲ್ಲ, ಅವರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಸಹೋದರತ್ವ ಮತ್ತು ಕೋಮು ಸೌಹಾರ್ದ ನಮಗೆ ಮುಖ್ಯ ಎಂದಿದ್ದಾರೆ.
ಬಿಜೆಪಿಯ ಅನಂತ್ ಕುಮಾರ್, ನಳಿನ್ಕುಮಾರ್ ಕಟೀಲ್, ಸುನೀಲ್ ಕುಮಾರ್ಗೆ ದ್ವೇಷವೇ ಬಂಡವಾಳವಾಗಿದೆ. ಬಿಜೆಪಿಯವರದ್ದು ಹೆದರಿಸೋದು ಮತ್ತು ಸರ್ವಾಧಿಕಾರ. ವಿರೋಧ ಪಕ್ಷ ರಹಿತ ದೇಶ ಮಾಡಲು ಬಿಜೆಪಿ ಹೊರಟಿದೆ.
ಏಕಪಕ್ಷೀಯ ದೇಶ ಮತ್ತು ಒಬ್ಬನೇ ನಾಯಕ ಇರಬೇಕು ಎಂದು ಭಾವಿಸಿದ್ದಾರೆ. ಈ ತರಹದ ಪ್ರಜಾಪ್ರಭುತ್ವ ಈ ದೇಶಕ್ಕೆ ಒಳ್ಳೆಯದಲ್ಲ. ಬಹಳ ಬುದ್ದಿವಂತಿಕೆಯಿಂದ ಧರ್ಮದ ಹೆಸರಲ್ಲಿ ತಂದಿಡುತ್ತಿದ್ದಾರೆ. ಈ ದೇಶದ ಸಮಸ್ಯೆ ಬಗ್ಗೆ ನರೇಂದ್ರ ಮೋದಿ ಮಾತನಾಡಲ್ಲ ಎಂದು ಕಿಡಿಕಾರಿದ್ದಾರೆ.





