ತುಮಕೂರು: ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬೇರೆ ಪಕ್ಷ ಸೇರಲ್ಲ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ತುಮಕೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನನ್ನು ಸಚಿವ ಸ್ಥಾನದಿಂದ ತೆಗೆದು ಹಾಕಲು ಹಲವಾರು ಕಾರಣಗಳಿರಬಹುದು. ಅವರು ಏನು ಹೇಳಿದ್ದರೂ ನಡೆಯುತ್ತದೆ. ನಾವು ಹೇಳಿದರೆ ನಡೆಯಲ್ಲ ಎಂದು ಅಸಮಾಧಾನ ಹೊರಹಾಕಿದರು.
ಇದೇ ವೇಳೆ ಹನಿಟ್ರ್ಯಾಪ್ ಹಾಗೂ ಡಿಸಿಎಂ ವಿರುದ್ಧ ಮಾತನಾಡಿರುವುದು ಕೂಡ ನನ್ನನ್ನು ತೆಗೆಯಲು ಕಾರಣವಾಗಿರಬಹುದು. ಯಾವುದೇ ಏನೇ ಇದ್ದರೂ ಅಂತಿಮವಾಗಿ ಸತ್ಯ ಗೆದ್ದೇ ಗೆಲ್ಲುತ್ತದೆ ಎಂದು ಹೇಳಿದರು.
ಇನ್ನು ಬಿಜೆಪಿ ಅಥವಾ ಜೆಡಿಎಸ್ ಪಕ್ಷದತ್ತ ಮುಖ ಮಾಡುವಿರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಬೇರೆ ಪಕ್ಷಕ್ಕೆ ಹೋಗಲ್ಲ. ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ. ನನಗೆ ಬೇರೆ ಪಕ್ಷಕ್ಕೆ ಸೇರಬೇಕಾದ ಅವಶ್ಯಕತೆ ಇಲ್ಲ. ಬೇರೆ ಕಡೆ ಹೋಗುವುದು ಇಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದು, ನನ್ನ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟನೆ ನೀಡಿದರು.





