ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಕಳೆದ ಕೆಲ ದಿನಗಳಿಂದ ಬಂಧನದಲ್ಲಿರುವ ಸ್ಯಾಂಡಲ್ವುಡ್ ನಟ ದರ್ಶನ್ ಜೈಲಿನಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಮಧ್ಯೆ ಜೈಲಿನಲ್ಲಿರುವ ದರ್ಶನ್ಗೆ ಪ್ರಭಾವಿ ರಾಜಕಾರಣಿಗಳು ರಕ್ಷಣೆ ಒದಗಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿತ್ತು.
ಈ ಬೆನ್ನಲ್ಲೇ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕೂಡ ಜೈಲಿನಲ್ಲಿರುವ ದರ್ಶನ್ರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆರೋಪ ಕೇಳಿ ಬಂದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ನಾನು ದರ್ಶನ್ ರಕ್ಷಣೆ ಮಾಡುತ್ತಿರುವುದು ಸುಳ್ಳು. ನಾನು ದರ್ಶನ್ ಭೇಟಿಯಾಗಿ 3 ತಿಂಗಳಾಗಿದೆ. ಯಾರೇ ತಪ್ಪು ಮಾಡಿದ್ರೂ ಅದು ತಪ್ಪೇ. ಕಾನೂನಿನಡಿ ಎಲ್ಲರೂ ಒಂದೇ. ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಿ, ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ನಾನು ಈ ವಿಚಾರದಲ್ಲಿ ದರ್ಶನ್ ಪರ ನಿಲ್ಲಲ್ಲ ಎಂದು ವದಂತಿಗಳಿಗೆಲ್ಲಾ ತೆರೆ ಎಳೆದಿದ್ದಾರೆ.





