ನಿನ್ನೆ ( ಫೆಬ್ರವರಿ 1 ) ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಡೆಸಿದ 28ನೇ ಸಭೆಯಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹಾತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಭಾರೀ ಹಿನ್ನಡೆಯುಂಟಾಗಿದೆ. ಮೇಕೆದಾಟು ಯೋಜನೆಯ ಪ್ರಸ್ತಾವವನ್ನು ಕಾವೇರಿ ಜಲ ಆಯೋಗಕ್ಕೆ ಹಿಂತಿರುಗಿಸುವ ಅಭಿಪ್ರಾಯವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಬಹುತೇಕ ಸದಸ್ಯರು ವ್ಯಕ್ತಪಡಿಸಿದ್ದಾರೆ.
ಈ ಸಭೆಯಲ್ಲಿ ಕರ್ನಾಟಕವು ಸಭೆಯ ಕಾರ್ಯಸೂಚಿಯನ್ನು ಮುಂದೂಡದೇ ಮೇಕೆದಾಟು ಯೋಜನೆ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಾಯಿಸಿತು. ಆದರೆ ಇದಕ್ಕೆ ತಮಿಳುನಾಡು ಹಾಗೂ ಪುದುಚೆರಿ ಆಕ್ಷೇಪ ವ್ಯಕ್ತಪಡಿಸಿದವು.
ರಾಜ್ಯ ಹೇಳಿದ್ದೇನು?
ಕರ್ನಾಟಕದ ಪರ ವಕೀಲರು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಸಲ್ಲಿಕೆಗಳನ್ನು ಪರಿಗಣಿಸಿ, ಪರಿಣತ ಸಂಸ್ಥೆಯು ಸಂಕಷ್ಟದ ವರ್ಷಗಳಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಮೇಕೆದಾಟು ಯೋಜನೆಯನ್ನು ಪರಿಗಣಿಸಬೇಕು ಹಾಗೂ ನಿರ್ಧರಿಸಬೇಕು ಎಂದು ಮನವಿ ಮಾಡಿದರು. ಅಲ್ಲದೇ ಮೇಕೆದಾಟು ನಿರ್ಮಾಣದ ಕುರಿತು ನ್ಯಾಯಾಧೀಕರಣದ ತೀರ್ಪಿನಲ್ಲಿ ಅಥವಾ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಯಾವುದೇ ನಿರ್ಬಂಧ ಹಾಗೂ ಅಡೆತಡೆಗಳಿಲ್ಲ ಎಂಬ ಅಂಶವನ್ನು ಉಲ್ಲೇಖಿಸಿ ಗಮನ ಸೆಳೆಯಿತು. ಯೋಜನೆಯ ಸಂಕ್ಷಿಪ್ತ ವರದಿ ಬಗ್ಗೆ ಸೂಕ್ತ ನಿಲುವು ತೆಗೆದುಕೊಳ್ಳಬೇಕು ಮತ್ತು ಈ ಯೋಜನೆಯ ವರದಿ ಯಾವುದೇ ನಿಬಂಧನೆಯನ್ನು ಉಲ್ಲಂಘಿಸುವುದಿಲ್ಲ ಎಂದು ಕೇಂದ್ರ ಜಲ ಆಯೊಗಕ್ಕೆ ಅಭಿಪ್ರಾಯಗಳನ್ನು ರವಾನಿಸುವಂತೆ ಮನವಿ ಮಾಡಿತು.
ಕೊನೆಗೆ ಮೇಕೆದಾಟು ಯೋಜನೆ ವಿಚಾರ ಸುಪ್ರೀಂ ಕೋರ್ಟ್ನಲ್ಲಿ ಬಾಕಿಯಿದ್ದು, ಪ್ರಾಧಿಕಾರದಲ್ಲಿ ಯೋಜನೆಯ ಚರ್ಚೆಗೆ ಸುಪ್ರೀಂನಿಂದ ಯಾವುದೇ ನಿರ್ಬಂಧವಿಲ್ಲ ಎಂದು ಪ್ರಾಧಿಕಾರದ ಅಧ್ಯಕ್ಷರು ಹಾಗೂ ಕೇಂದ್ರ ಜಲಶಕ್ತಿ ಸಚಿವಾಲಯದ ಸದಸ್ಯರು ಅಭಿಪ್ರಾಯಪಟ್ಟರು. ಬಳಿಕ ಪ್ರಾಧಿಕಾರದ ಎಲ್ಲ ಸದಸ್ಯರ ಅಭಿಪ್ರಾಯ ಪಡೆಯಲಾಯಿತು.





