ರಾಯಚೂರು: ಹಿಂದೂ ಅನ್ನೋದು ಅವಮಾನಕರ ಶಬ್ಧ. ಯಾರು ಹೀನನಾಗಿದ್ದಾನೋ, ಯಾರು ದೂಷಣೆಗೆ ಒಳಗಾಗಿದ್ದಾನೋ ಅವನೇ ಹಿಂದೂ ಎಂದು ಚಿಂತಕ ಪ್ರೊ.ಕೆ.ಎಸ್.ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪದೇ ಪದೇ ಹಿಂದುಗಳ ವಿರುದ್ಧ ಮಾತನಾಡಿ ಆಕ್ರೋಶಕ್ಕೆ ಗುರಿಯಾಗುತ್ತಿರುವ ಪ್ರೊ.ಕೆ.ಎಸ್.ಭಗವಾನ್ ಅವರು, ರಾಯಚೂರಿನ ದೇವದುರ್ಗದ ಕನಕಗುರುಪೀಠ ತಿಂಥಣಿ ಬ್ರಿಡ್ಜ್ನಲ್ಲಿ ನಡೆಯುತ್ತಿರುವ ಹಾಲುಮತ ಉತ್ಸವಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಹಿಂದು ಪದದ ಬಗ್ಗೆ ಮಾತನಾಡಿದ ಅವರು, ಹಿಂದೂ ಶಬ್ಧ ಬಂದಿದ್ದು 1030ನೇ ಇಸವಿಯಲ್ಲಿ. ಪರ್ಷಿಯನ್ ಲೇಖಕ ಆಲ್ಬರೋನಿ ಭಾರತದ ಬಗ್ಗೆ ಬರೆಯುತ್ತಾ ಸಿಂದೂ ನದಿಯನ್ನು ಹಿಂದೂ ಎಂದು ಕರೆದರು.
ಮುಂದೆ ಅಕ್ಬರ್ನ ಕಾಲದಲ್ಲಿ ಈ ದೇಶಕ್ಕೆ ಹಿಂದೂಸ್ತಾನ ಎಂದು ಹೆಸರು ಬಂತು. ಹೀಗಾಗಿ ರಾಮಾಯಣ, ಮಹಾಭಾರತ, ಪುರಾಣ, ವೇದ ಗ್ರಂಥಗಳಲ್ಲಿ ಹಿಂದೂ ಎನ್ನುವ ಹೆಸರಿಲ್ಲ ಎಂದರು.
ಕಾಶ್ಮೀರದ ಶೈವ ಗ್ರಂಥಗಳಲ್ಲಿ ಹಿಂದೂ ಪದಕ್ಕೆ ಯಾರೂ ಹೀನನಾಗಿದ್ದಾರೋ, ಯಾರು ದೂಷಣೆಗೆ ಒಳಗಾಗಿದ್ದಾರೋ ಅವನು ಹಿಂದೂ ಅಂತ ಇದೆ. ಹಾಗಾಗಿ ಹಿಂದೂ ಎನ್ನುವ ಶಬ್ಧ ಸಹ ಮನುಸ್ಮೃತಿ ಪ್ರಕಾರ ಅಪಮಾನಕ್ಕೆ ಒಳಗಾಗಿದೆ.
ಒಂದೊಂದು ಮಠ ಒಂದೊಂದು ಸಮುದಾಯಕ್ಕೆ ಸೀಮಿತವಾಗಿದೆ. ಇದರಿಂದ ಜನರ ಮನಸ್ಸು ಬಹಳ ಸಂಕುಚಿತವಾಗುತ್ತಿದೆ. ಎಲ್ಲರೂ ಸಮಾನರು ಎನ್ನುವ ಭಾವನೆಗೆ ಅಡ್ಡಿ ಬರುತ್ತಿದೆ ಎಂದು ಹಿಂದು ಎಂಬ ಪದದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಹಿಂದುಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ.





