ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಭಾರೀ ಏರಿಕೆಯಾಗಿದ್ದು, ಇಲ್ಲಿಯವರೆಗೆ 10,000 ಪ್ರಕರಣಗಳು ದೃಢಪಟ್ಟಿವೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 487 ಡೆಂಗ್ಯೂ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಇದರೊಂದಿಗೆ ಪ್ರಕರಣಗಳ ಸಂಖ್ಯೆ 10,449ಕ್ಕೆ ಏರಿಕೆಯಾಗಿದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ 358 ಸಕ್ರಿಯ ಪ್ರಕರಣಗಳಿದ್ದು, ಡೆಂಗ್ಯೂನಿಂದ 8 ಮಂದಿ ಸಾವನ್ನಪ್ಪಿದ್ದಾರೆ.
ಇನ್ನೂ ಡೆಂಗ್ಯೂ ಹರಡದಂತೆ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ. ಮುಂಗಾರು ಅವಧಿ ಮುಗಿಯುವವರೆಗೂ ಪ್ರತಿಯೊಬ್ಬರು ತುಂಬಾ ಮುಂಜಾಗ್ರತೆ ವಹಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.
ಡೆಂಗ್ಯೂ ತಡೆಗಟ್ಟಲು ಸಾರ್ವಜನಿಕರು ಕೂಡ ಸಹಕಾರ ನೀಡಬೇಕಾಗಿದ್ದು, ಮನೆಯ ಸುತ್ತ ಮುತ್ತ ಸಣ್ಣ ಸಣ್ಣ ಗುಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಂಡು ಶುಚಿತ್ವ ಕಾಪಾಡಬೇಕು. ಗುಂಡಿಗಳಲ್ಲಿ ಹೆಚ್ಚಿನ ದಿನ ನೀರು ನಿಲ್ಲದಂತೆ ಮಾಡಬೇಕು. ಇಲ್ಲದಿದ್ದರೆ ಆ ಗುಂಡಿಗಳಿಂದಲೇ ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತದೆ ಎಂದು ಆರೋಗ್ಯ ಇಲಾಖೆ ಜನತೆಗೆ ಎಚ್ಚರಿಕೆ ನೀಡಿದೆ.
ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಡೆಂಗ್ಯೂ ವಿರುದ್ಧ ಹೋರಾಟ ನಡೆಸಬೇಕಿದ್ದು, ಮನೆಯ ಸುತ್ತಮುತ್ತ ಹಾಗೂ ಮನೆಯ ಒಳಗಡೆ ಶುಚಿತ್ವ ಕಾಪಾಡಿಕೊಳ್ಳಬೇಕಿದೆ.