ನೆರೆ ರಾಜ್ಯ ಕೇರಳದಲ್ಲಿ ಕೊವಿಡ್ನ ಉಪತಳಿ ಜೆಎನ್ 1 ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕರ್ನಾಟಕದಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಿನ್ನೆ ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಂದೇ ದಿನ ರಾಜ್ಯದಲ್ಲಿ ಒಟ್ಟು 44 ಪ್ರಕರಣಗಳು ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 79ಕ್ಕೆ ಏರಿಕೆ ಕಂಡಿದೆ.
ಹೀಗೆ ರಾಜ್ಯದಲ್ಲಿಯೂ ಸಹ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದ್ದು ಈ ಕುರಿತು ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ ನಡೆಸಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯ 64 ವರ್ಷದ ವ್ಯಕ್ತಿ 5 ದಿನಗಳ ಹಿಂದೆ ಮಲ್ಲಿಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿಸಿದ ದಿನೇಶ್ ಗುಂಡೂರಾವ್ ಮೃತ ವ್ಯಕ್ತಿಯ ಜಿನೊಮಿಕ್ ಸೀಕ್ವೆನ್ಸ್ ರಿಪೋರ್ಟ್ಗಾಗಿ ಕಾಯುತ್ತಿದ್ದೇವೆ ಎಂದರು. ಇನ್ನು ಮೃತ ವ್ಯಕ್ತಿ ಕುಟುಂಬದ ಐವರಿಗೆ ಕೊವಿಡ್ ಟೆಸ್ಟ್ ನಡೆಸಲಾಗಿದ್ದು, ಎಲ್ಲಾ ವ್ಯಕ್ತಿಗಳ ವರದಿ ಸಹ ನೆಗೆಟಿವ್ ಬಂದಿದೆ ಹಾಗೂ ಐವರನ್ನೂ ಕ್ವಾರಂಟೈನ್ನಲ್ಲಿ ಇಡಲಾಗಿದೆ ಎಂಬ ಮಾಹಿತಿಯನ್ನೂ ಸಹ ಸಚಿವರು ಹಂಚಿಕೊಂಡಿದ್ದಾರೆ.
ಅಲ್ಲದೇ ಕೇಂದ್ರದಿಂದ ಯಾವುದೇ ಮಾರ್ಗಸೂಚಿ ಬಾರದ ಕಾರಣ ಹೊಸ ವರ್ಷಾಚರಣೆಗೆ ನಿರ್ಬಂಧನೆ ಇಲ್ಲ ಎಂದಿರುವ ದಿನೇಶ್ ಗುಂಡೂರಾವ್ ನಾಳೆ ಸಿಎಂ ಜತೆ ತಾಂತ್ರಿಕ ಸಲಹಾ ಸಮಿತಿಯ ಸಭೆ ನಡೆಸಲಾಗುವುದು ಎಂದಿದ್ದಾರೆ. ಇನ್ನು ಮೈಸೂರು, ಚಾಮರಾಜನಗರ ಭಾಗಗಳಲ್ಲಿ ಹೆಚ್ಚು ಟೆಸ್ಟಿಂಗ್ ಹೇಳಿದ್ದೇವೆ, ಜನಸಂದಣಿ ಪ್ರದೇಶಗಳಲ್ಲಿ ಮಾಸ್ಕ್ ಧರಿಸಲು ಹೇಳುತ್ತೇವೆ, ಹೆಚ್ಚು ಕೇಸ್ ಆದ್ರೆ ಕ್ವಾರಂಟೈನ್ ನಿಯಮದಲ್ಲಿ ಬದಲಾವಣೆ ಮಾಡುತ್ತೇವೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.





