ಬೆಂಗಳೂರು: ಭೂಮಿ ಅಕ್ರಮ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವವ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮಧ್ಯೆ ಜಟಾಪಟಿ ನಡೆಯುತ್ತಿದ್ದು, ಇದೀಗ ಎಚ್ಡಿಕೆಗೆ ಡಿಕೆಶಿ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಏಪ್ರಿಲ್.5) ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗಳಿಗೆ ನಾನು ಹೆದರಲ್ಲ. ಅವರ ಹೆಸರನಲ್ಲಿ ಯಾವ್ಯಾವ ಕಡೆ ಎಷ್ಟು ಭೂಮಿ ಇದೆಯೆಂದು ಬಹಿರಂಗ ಪಡಿಸಲಿ. ನಾನು ಸಹ ನನ್ನ ಹೆಸರಿನಲ್ಲಿ ಹಾಗೂ ನನ್ನ ಮಕ್ಕಳ ಹೆಸರಿನಲ್ಲಿ ಎಲ್ಲೆಲ್ಲಿ ಎಷ್ಟೇಷ್ಟು ಭೂಮಿ ಇದೆ ಎಂದು ಬಹಿರಂಗಪಡಿಸುತ್ತೇನೆ. ಒಂದು ವೇಳೆ ನಾನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದೇ ಆದರೆ ಯಾವುದೇ ಶಿಕ್ಷೆಗೂ ಸಿದ್ಧನಾಗಿರುವೆ ಎಂದು ಹೇಳಿದ್ದಾರೆ.
ಏನಿದು ಜಟಾಪಟಿ?
ಎಚ್.ಡಿ.ಕುಮಾರಸ್ವಾಮಿ ಅವರು ಶನಿವಾರ ಸುದ್ದಿಗೋಷ್ಠಿ ನಡೆಸಿ, ಮಾಜಿ ಪ್ರಧಾನಿಯವರ ಮಗ ನಾನು. ಕೇತಗಾನಹಳ್ಳಿಯಲ್ಲಿ 4 ಎಕರೆ ಭೂಮಿ ಒತ್ತುವರಿ ಮಾಡಿಕೊಳ್ಳಬೇಕಾ? ಅತಿಕ್ರಮಣದ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದರು. ಅಲ್ಲದೇ ಡಿಸಿಎಂ ಎನ್ನುವ ವ್ಯಕ್ತಿ ಹಗರಣಗಳ ಮಹಾನಾಯಕ ಮತ್ತು ಏಳು ಕಂಪೆನಿ ಹೆಸರನಲ್ಲಿ ವ್ಯವಹಾರ ನಡೆಸಿದ್ದಾರೆ. ಈ ಬಗ್ಗೆ ನನ್ನ ಬಳಿ ದಾಖಲೆಗಳಿದ್ದು, ಆದಷ್ಟು ಬೇಗ ಬಿಡುಗಡೆ ಮಾಡುತ್ತೇನೆ ಎಂದಿದ್ದರು.





