ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ದಾಖಲೆಯ ಗೆಲುವು ಸಾಧಿಸಿರುವ ಹೆಚ್ಡಿ ಕುಮಾರಸ್ವಾಮಿಗೆ ನರೇಂದ್ರ ಮೋದಿ ಸರ್ಕಾರದಲ್ಲಿ ಕೇಂದ್ರ ಸಚಿವ ಸ್ಥಾನ ಸಿಗಲಿದೆಯಾ ಎಂಬುದರ ಕುರಿತು ಚರ್ಚೆಗಳು ಜೋರಾಗಿವೆ. ಈ ಕುರಿತ ಪ್ರಶ್ನೆ ಕುಮಾರಸ್ವಾಮಿಯವರಿಗೂ ಸಹ ಎದುರಾಗಿದ್ದು, ಅವರು ಪ್ರತಿಕ್ರಿಯೆ ನೀಡಿದ್ದಾರೆ.
ದೆಹಲಿಗೆ ಹೋಗಿ ಸಚಿವನಾಗುವುದಕ್ಕಿಂತ ನಾಡಿನ ಜನತೆಯ ಸಮಸ್ಯೆಗೆ ಪರಿಹಾರ ನೀಡಬೇಕು. ನೀರಾವರಿ ವಿಷಯದಲ್ಲಿ ನ್ಯಾಯ ಪಡೆಯಬೇಕು. ಮಂತ್ರಿ ಸ್ಥಾನ ಅನಂತರದ ಮಾತು. ನನ್ನ ಕಡೆಯಿಂದ ಕೇಂದ್ರಕ್ಕೆ ಯಾವ ಮುಜುಗರವೂ ಇರುವುದಿಲ್ಲ. ಮೈತ್ರಿ ಧರ್ಮ ಪಾಲನೆ ಮಾಡುತ್ತೇವೆ. ರಾಜ್ಯದ ಎಲ್ಲಾ ಸಂಸದರ ಜತೆ ಒಟ್ಟಾಗಿ ಕೆಲಸ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಗೆಲುವಿನ ಬಗ್ಗೆ ಹೆಚ್ಡಿಕೆ ಹೇಳಿದ್ದಿಷ್ಟು
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿಯ ದೊಡ್ಡ ಗೆಲುವು ಜನರು ಕೊಟ್ಟ ತೀರ್ಪು. ಯಾವ ತಂತ್ರ ಕುತಂತ್ರದ ಮೂಲಕವೂ ಚುನಾವಣೆ ನಡೆಸಿಲ್ಲ. ಜನ ಗೆಲ್ಲಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಮಾರ್ಮಿಕವಾಗಿ ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.





